
ಹುಣಸೂರು: ‘ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಯನ್ನು ಹೊಂದುವುದರಿಂದ ಅಸಾಧ್ಯ ಎಂಬುದನ್ನು ಸುಲಭವಾಗಿ ಸಾಧಿಸಲು ಸಹಕಾರಿ ಆಗಲಿದೆ’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ನಗರದ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಸಾಂಸ್ಕೃತಿಕ,ಕ್ರೀಡೆ, ಎನ್.ಎಸ್.ಎಸ್., ರೆಡ್ ಕ್ರಾಸ್ ಘಟಕ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾರ್ಥಿಗಳು ಸಂಸ್ಕಾರ, ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು, ಪಠ್ಯದೊಂದಿಗೆ ಪಠ್ಯೇತರವಾಗಿ ಸಂಸ್ಕಾರ ಕಲಿಕೆ ಅಗತ್ಯವಿದೆ. ಜೀವನದಲ್ಲಿ ಮೌಲ್ಯ ಅಳವಡಿಸಿಕೊಂಡು ಸಮಾಜದಲ್ಲಿ ಎಲ್ಲರೊಂದಿಗೆ ಸಾಮರಸ್ಯತೆಯೊಂದಿಗೆ ಬದುಕುವ ಮನಸ್ಥಿತಿಯನ್ನು ಹೊಂದಬೇಕು’ ಎಂದರು.
‘ಕಾಲೇಜು ಅಭಿವೃದ್ಧಿ ಸಮಿತಿ ನೀಡಿದ 10 ಬೇಡಿಕೆಗಳಲ್ಲಿ ಕ್ಯಾಂಟಿನ್ ಆಧುನಿಕರಣಕ್ಕೆ ₹ 15 ಲಕ್ಷ, ವಾಹನ ನಿಲ್ದಾಣಕ್ಕೆ ಮತ್ತು ಸಭಾಂಗಣದ ಆಸನ ಖರೀದಿಗೆ ಅನುಮತಿ ನೀಡಿದರು. ಒಳ ಕ್ರೀಡಾಂಗಣ ಪೂರ್ಣಗೊಳಿಸಲು ₹ 50 ಲಕ್ಷ ನೀಡಿದ್ದು ಹೆಚ್ಚುವರಿ ₹ 20 ಲಕ್ಷ ನೀಡುವ ಭರವಸೆ ನೀಡಿದರು. ವಿದ್ಯಾರ್ಥಿ ವಸತಿ ನಿಲಯ ಆರಂಭಿಸುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.
ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಗುರುಸಿದ್ದಯ್ಯ ಮಾತನಾಡಿ, ವಿದ್ಯಾರ್ಥಿಗಳು ನಿಮ್ಮಲ್ಲಿನ ಬೌದ್ಧಿಕ ಸಾಮರ್ಥ್ಯ ಅರಿಯದಿದ್ದರೆ ಯಶಸ್ಸು ಅಸಾಧ್ಯ, ಯಶಸ್ಸಿಗೆ 5 ಸೂತ್ರವನ್ನು ಅಳವಡಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಕಟ್ಟುನಿಟ್ಟಿನಿಂದ ಪಾಲಿಸಿದಲ್ಲಿ ಭವಿಷ್ಯ ಸುಖಕರವಾಗಿರಲಿದೆ’ ಎಂದರು.
ಪ್ರಾಂಶುಪಾಲ ಬಿ.ಸಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕ್ ಪಾಷ, ಧರ್ಮಾಪುರ ನಾರಾಯಣ್, ನಗರಸಭಾ ಸದಸ್ಯೆ ಸಮೀನಾ ಇಮ್ರಾನ್, ಹರವೆ ಶ್ರೀಧರ್, ಟಿಎಪಿಸಿಎಂಎಸ್ ನಿರ್ದೇಶಕ ಗೋವಿಂದರಾಜ್ ಇದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಕುಮಾರ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.