ADVERTISEMENT

ಬಹುಶಿಸ್ತೀಯ ದೃಷ್ಟಿಕೋನದ ಶಕ್ತಿ: ಇಂದಿರಾ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 13:50 IST
Last Updated 8 ಆಗಸ್ಟ್ 2022, 13:50 IST
   

ಮೈಸೂರು: ‘ಬೋಧನೆ-ಸಂಶೋಧನೆಗಳನ್ನು ಬಹುಶಿಸ್ತೀಯ ದೃಷ್ಟಿಕೋನದಿಂದ ಅರ್ಥೈಸುವ ಶಕ್ತಿಯನ್ನು ಅಧ್ಯಾಪಕರು ಬೆಳೆಸಿಕೊಳ್ಳಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್‌ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ 45 ದಿನಗಳವರೆಗೆ ನಡೆಸಿದ ಯುಜಿಸಿ-ನೆಟ್/ಕೆ-ಸೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.

‘ಪ್ರಸ್ತುತ ಶೈಕ್ಷಣಿಕ ಪ್ರಪಂಚದ ನೀರೀಕ್ಷೆಗಳು ಹೆಚ್ಚು ವಿಸ್ತಾರವಾಗುತ್ತಿವೆ. ಆದ್ದರಿಂದ ಅಧ್ಯಾಪಕರು ನಿರಂತರ ಹುಡುಕಾಟದಲ್ಲಿ ತೊಡಗಬೇಕು’ ಎಂದರು.

ADVERTISEMENT

‘ಇಂದು ಜ್ಞಾನದ ಮೂಲಗಳು ಹೆಚ್ಚಿವೆ. ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವಕಾಶಗಳೂ ಇವೆ. ತರಗತಿಗಳಲ್ಲಿ ಪಡೆದ ಜ್ಞಾನವನ್ನು ಬದುಕಿನ ವಾಸ್ತವಗಳಿಗೆ ಅನ್ವಯಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಜ್ಞಾನಾರ್ಜನೆಯನ್ನು ತರಗತಿಗಳಿಗೆ ಮಾತ್ರ ಸೀಮಿತಗೊಳಿಸದೆ ಹೊರ ಪ್ರಪಂಚದ ಅರಿವು ಹಾಗೂ ಅನುಭವಗಳನ್ನು ಅಧ್ಯಾಪಕರು ನೀಡುವಂತಾಗಬೇಕು’ ಎಂದು ಆಶಿಸಿದರು.

‘ಮುಕ್ತ ಭಂಡಾರ’ ಅಧ್ಯಯನ ಪುಸ್ತಕವನ್ನು ಕೆಎಸ್‌ಒಯು ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ ಬಿಡುಗಡೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಸಚಿವ ಡಾ.ಎ.ಖಾದರ್ ಪಾಷ, ‘ಯುಜಿಸಿ, ನೆಟ್ ಹಾಗೂ ಕೆ-ಸೆಟ್ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳು ತಾವು ತೆಗೆದುಕೊಳ್ಳುವ ಐಚ್ಛಿಕ ವಿಷಯದ ಜೊತೆಗೆ ಮೂಲಭೂತ ಅಂಶಗಳನ್ನು ತಿಳಿದಿರಬೇಕು. ಆಗ, ಯಶಸ್ಸು ಗಳಿಸಬಹುದು’ ಎಂದರು.

ಶೈಕ್ಷಣಿಕ ಡೀನ್ ಪ್ರೊ.ಕಾಂಬ್ಳೆ ಅಶೋಕ್, ಅಧ್ಯಯನ ಡೀನ್ ಪ್ರೊ.ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಬಿ.ಗಣೇಶ್ ಕೆ.ಜಿ. ಕೊಪ್ಪಲ್, ಸಿದ್ದೇಶ್ ಹೊನ್ನೂರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.