ADVERTISEMENT

ದೇವನಹಳ್ಳಿ ಹೋರಾಟ | ಮಾತು ತಪ್ಪಿದ ಸಿದ್ದರಾಮಯ್ಯ: ನಟ ಪ್ರಕಾಶ ರಾಜ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 7:27 IST
Last Updated 11 ಜುಲೈ 2025, 7:27 IST
   

ಮೈಸೂರು: ' ಬೆಂಗಳೂರಿನ ದೇವನಹಳ್ಳಿ ಹೋರಾಟದ ವಿಚಾರದಲ್ಲಿ ಜುಲೈ 15ರವರೆಗೆ ಕಾಲಾವಕಾಶ ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ನಡುವೆಯೇ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡುವ ಮೂಲಕ ನಂಬಿಕೆ ದ್ರೋಹ ಮಾಡಿದ್ದಾರೆ' ಎಂದು ನಟ ಪ್ರಕಾಶ ರಾಜ್ ವಾಗ್ದಾಳಿ ನಡೆಸಿದರು.

'ದೇವನಹಳ್ಳಿಯಲ್ಲಿ ರೈತರ ಜಮೀನು ಕಿತ್ತುಕೊಂಡು ಅಲ್ಲಿ 1700 ಎಕರೆಯಲ್ಲಿ ಡಿಫೆನ್ಸ್ ಕಾರಿಡಾರ್ ಸ್ಥಾಪನೆಗೆ ರಾಜ್ಯ ಸರ್ಕಾರ ಈಗ ಕೇಂದ್ರದ ಅನುಮತಿ ಕೇಳಿದೆ. ಕಾರಿಡಾರ್ ಗೆ ಏಕೆ ಇಷ್ಟು ಜಾಗ ಬೇಕು ಎಂಬುದನ್ನು ಅವರು ನಕ್ಷೆ ಸಮೇತ ವಿವರಿಸಲಿ' ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

'ಕಾರಿಡಾರ್ ಗೆ ಕೇವಲ 100 ಎಕರೆ ಬಳಸಿ ಉಳಿದ ಜಮೀನಿನಲ್ಲಿ ಐಷಾರಾಮಿ ಹೋಟೆಲ್ ಕಟ್ಟುತ್ತಾರೆ. ಅಲ್ಲಿ ನಮ್ಮ ರೈತರು ಕೂಲಿಯಾಳು ಗಳಾಗಬೇಕಾಗುತ್ತದೆ' ಎಂದು ಎಚ್ಚರಿಸಿದರು.

ADVERTISEMENT

ಹೋರಾಟ ಒಡೆಯುವ ಯತ್ನ:

'ಸರ್ಕಾರ ಯಾರೋ‌ ಮೂವರು ರೈತರನ್ನು ಮಧ್ಯ ಕರೆ ತಂದು ಚಳವಳಿ ಒಡೆಯುವ ಪ್ರಯತ್ನ ಮಾಡುತ್ತಿದೆ.‌ ಹಳ್ಳಿಗಳಿಗೆ ಪುಡಾರಿಗಳನ್ನು ಕಳುಹಿಸಿ ಹೆದರಿಸುತ್ತಿದೆ. ಹಸಿರು ವಲಯ ಮಾಡುತ್ತೇವೆ ಎಂಬ ನಾಟಕ ಆಡಿ ಜನರನ್ನು ಹೆದರಿಸುತ್ತಿದೆ. ನಿಮ್ಮ ನಾಟಕ‌ ನಮ್ಮೆಲ್ಲರ ಕಣ್ಣಿಗೆ ಕಾಣಿಸುತ್ತಿದೆ. 15 ರಂದು ರೈತ ಪರ ನಿರ್ಧಾರ ಪ್ರಕಟಿಸದೇ ಇದ್ದರೆ ಹೋರಾಟ ತೀವ್ರಗೊಳಿಸುತ್ತೇವೆ' ಎಂದು ಎಚ್ಚರಿಸಿದರು.

ಹೋರಾಟಗಾರರಾದ ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಗುರುಪ್ರಸಾದ್ ಕೆರಗೋಡು ಮಾತನಾಡಿ, ದೇವನಹಳ್ಳಿ ವಿಚಾರದಲ್ಲಿ ಸರ್ಕಾರದ ನಡೆಯನ್ನು ಖಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.