ADVERTISEMENT

ಪ್ರಕಾಶನ ಸಂಸ್ಥೆಗಳು ಲೇಖಕರನ್ನು ಶೋಷಿಸಬಾರದು: ತಳವಾರ್

ಸಮಾನತೆ ಪ್ರಕಾಸನ ಉದ್ಘಾಟನೆ; ವಿ.ಶ್ರೀನಿವಾಸಪ್ರಸಾದ್ ಭಾಗಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 13:54 IST
Last Updated 9 ಡಿಸೆಂಬರ್ 2019, 13:54 IST
ಮೈಸೂರಿನ ಕೃಷ್ಣಮೂರ್ತಿಪುರಂನ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ‘ಜೈಭೀಮ್ ಕಾಂಪ್ಲೆಕ್ಸ್‌’ನಲ್ಲಿ ಭಾನುವಾರ  ‘ಸಮಾನತೆ ಪ್ರಕಾಶನ’ವನ್ನು ಸಂಸದ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸಿ, ಪುಸ್ತಕಗಳನ್ನು ವೀಕ್ಷಿಸಿದರು. ಹಿರಿಯ ಪ್ರಕಾಶಕ ಟಿ.ಎಸ್.ಛಾಯಾಪತಿ, ಮುಖಂಡ ಸಿ.ಬಸವೇಗೌಡ, ವಿಶ್ವಮೈತ್ರಿ ಬುದ್ಧವಿಹಾರದ ಭಂತೆ ಕಲ್ಯಾಣಸಿರಿ, ಪ್ರೊ.ನೀಲಗಿರಿ ತಳವಾರ್ ಹಾಗೂ ಪ್ರಕಾಶನದ ಮಾಲೀಕ ಭರತ್ ರಾಮಸ್ವಾಮಿ ಇದ್ದಾರೆ
ಮೈಸೂರಿನ ಕೃಷ್ಣಮೂರ್ತಿಪುರಂನ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ‘ಜೈಭೀಮ್ ಕಾಂಪ್ಲೆಕ್ಸ್‌’ನಲ್ಲಿ ಭಾನುವಾರ  ‘ಸಮಾನತೆ ಪ್ರಕಾಶನ’ವನ್ನು ಸಂಸದ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸಿ, ಪುಸ್ತಕಗಳನ್ನು ವೀಕ್ಷಿಸಿದರು. ಹಿರಿಯ ಪ್ರಕಾಶಕ ಟಿ.ಎಸ್.ಛಾಯಾಪತಿ, ಮುಖಂಡ ಸಿ.ಬಸವೇಗೌಡ, ವಿಶ್ವಮೈತ್ರಿ ಬುದ್ಧವಿಹಾರದ ಭಂತೆ ಕಲ್ಯಾಣಸಿರಿ, ಪ್ರೊ.ನೀಲಗಿರಿ ತಳವಾರ್ ಹಾಗೂ ಪ್ರಕಾಶನದ ಮಾಲೀಕ ಭರತ್ ರಾಮಸ್ವಾಮಿ ಇದ್ದಾರೆ   

ಮೈಸೂರು: ಪ್ರಕಾಶನ ಸಂಸ್ಥೆಗಳು ಲೇಖಕರನ್ನು ಶೋಷಿಸಬಾರದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್ ತಿಳಿಸಿದರು.

ಇಲ್ಲಿನ ಕೃಷ್ಣಮೂರ್ತಿಪುರಂನ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ‘ಜೈಭೀಮ್ ಕಾಂಪ್ಲೆಕ್ಸ್‌’ನಲ್ಲಿ ಭಾನುವಾರ ನಡೆದ ಭರತ್ ರಾಮಸ್ವಾಮಿ ಅವರ ‘ಸಮಾನತೆ ಪ್ರಕಾಶನ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಹಲವು ಪ್ರಕಾಶನ ಸಂಸ್ಥೆಗಳು ಲೇಖಕರಿಗೆ ಕೊಡಬೇಕಾದ ಗೌರವ ಸಂಭಾವನೆ ಕೊಡುತ್ತಿಲ್ಲ. ಕನಿಷ್ಠ ಗೌರವ ಪ್ರತಿಗಳನ್ನೂ ನೀಡುತ್ತಿಲ್ಲ. ಇಂತಹ ಪರಿಸ್ಥಿತಿ ತಿಳಿಯಾಗಿ, ಇಬ್ಬರ ಮಧ್ಯೆಯೂ ಆ‍ಪ್ತ ಸಂಬಂಧ ಮೂಡಬೇಕು.ಗ್ರಂಥ ಪ್ರಕಟಣೆಯು ಗ್ರಂಥೋದ್ಯಮವಾಗಿರುವ ಈ ಪರಿಸ್ಥಿತಿಯಲ್ಲಿ ಭರತ್ ರಾಮಸ್ವಾಮಿ ಅವರು ಲಾಭವೊಂದನ್ನೇ ಪ್ರಮುಖ ಗುರಿಯನ್ನಾಗಿಸಿಕೊಳ್ಳದೇ ಪ್ರಕಾಶನ ಸಂಸ್ಥೆ ಕಟ್ಟಿರುವುದು ನಿಜಕ್ಕೂ ಸಂತಸದ ವಿಷಯ ಎಂದು ಶ್ಲಾಘಿಸಿದರು.

ADVERTISEMENT

ಪ‍್ರಗತಿಪರ ಯುವ ಬರಹಗಾರರ ಪ್ರೋತ್ಸಾಹ, ಸಮಾಜಮುಖಿ ಚಿಂತನೆಗಳನ್ನು ಹರಡುವುದು, ಸಮಾನತೆ ಹಾಗೂ ವೈಚಾರಿಕತೆಗಳನ್ನು ಪ್ರತಿಪಾದಿಸುವ ಬರಹಗಳ ಪ್ರಕಟಣೆಯನ್ನು ಗುರಿಯಾಗಿಸಿಕೊಂಡಿರುವ ಈ ಪ್ರಕಾಶನ ಸಂಸ್ಥೆ ಇಂತಹ ಹೊತ್ತಿನಲ್ಲಿ ಅಪರೂಪ ಎಂದು ಅವರು ಹೇಳಿದರು.

ಹಿಂದೆ ಮೈಸೂರಿನಲ್ಲಿ ಹಲವು ಪ್ರಕಾಶನ ಸಂಸ್ಥೆಗಳಿದ್ದವು. ವಿವಿಧ ಕಾರಣಗಳಿಗಾಗಿ ಇಂದು ಬಹುತೇಕ ಮುಚ್ಚಿ ಹೋಗಿವೆ. ಕೆಲವೇ ಕೆಲವು ಪ್ರಕಾಶನ ಸಂಸ್ಥೆಗಳಷ್ಟೇ ಉಳಿದಿವೆ.ವಿಶ್ವಮೈತ್ರಿ ಬುದ್ಧ ವಿಹಾರದ ಭಂತೆ ಕಲ್ಯಾಣಸಿರಿ ಮಾತನಾಡಿ, ‘ಅಂಬೇಡ್ಕರ್ ಅವರು ಸಮಾನತೆಯ ಪ್ರತಿರೂಪವಾಗಿದ್ದರು.ಇಂದು ದೇಶಕ್ಕೆ ಅಗತ್ಯವಾಗಿ ಬೇಕಾದ ಮೂಲವಸ್ತು ಸಮಾನತೆ. ಇದರ ಸಾಧನೆಗೆ ಸಾಮಾಜಿಕ ಹಾಗೂ ಮಾನಸಿಕ ಅಡೆತಡೆಗಳಿವೆ ಎಂದು ತಿಳಿಸಿದರು.

ತಳುಕಿನ ವೆಂಕಟಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಹಿರಿಯ ಪ್ರಕಾಶಕ ಟಿ.ಎಸ್.ಛಾಯಾಪತಿ, ಮುಖಂಡ ಸಿ.ಬಸವೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.