ADVERTISEMENT

ಶೋಭಾ ಕರಂದ್ಲಾಜೆ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 10:59 IST
Last Updated 9 ಡಿಸೆಂಬರ್ 2020, 10:59 IST
ಪುಷ್ಪಾ ಅಮರನಾಥ್
ಪುಷ್ಪಾ ಅಮರನಾಥ್   

ಮೈಸೂರು: ಹೋರಾಟ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರೆಂದು ಕರೆದಿರುವ ಸಂಸದರಾದ ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಒತ್ತಾಯಿಸಿದರು.

ಅನ್ನದಾತರನ್ನು ಭಯೋತ್ಪಾದಕರು ಎಂದಿರುವ ಅವರು ಸಂಸದರಾಗಲು ನಾಲಾಯಕ್‌ ಆಗಿದ್ದಾರೆ. ಕೂಡಲೇ ಅವರು ಜನರ ಕ್ಷಮೆ ಯಾಚಿಸಬೇಕು ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಒಬ್ಬ ಸಂಸದರಾಗಿ ರೈತರಿಗೆ ತಾವು ನೀಡಿರುವ ಕೊಡುಗೆಯನ್ನು ಬಹಿರಂಗಪಡಿಸಬೇಕು. ಬಿಜೆಪಿ ಶಾಸಕ ಸಿದ್ದು ಸವದಿ ತಳ್ಳಿದ್ದಾರೆ ಎನ್ನಲಾದ ಮಹಿಳೆ ನಮ್ಮ ಕೈಗೆ ಸಿಗುತ್ತಲೇ ಇಲ್ಲ. ಅವರ ಮೇಲೂ ಒತ್ತಡ ಹೇರಲಾಗುತ್ತಿದೆ. ಮಹಿಳಾ ಸಂಸದರಾಗಿ ಈ ಕುರಿತು ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಬೇಕು’ ಎಂದು ಹೇಳಿದರು.

ADVERTISEMENT

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಂದ್‌ನ್ನು ವಿಫಲ ಎಂದು ಹೇಳಿರುವುದು ಹಾಸ್ಯಾಸ್ಪದ. ರೈತರ ಮನವಿಯನ್ನು ಅವರು ಆಲಿಸಬೇಕು ಎಂದರು.

ಬಿಜೆಪಿ ನೇತೃತ್ವದ ಸರ್ಕಾರವು ದೇಶವನ್ನು ಕಿಚ್ಚಿನ ದೇಶವನ್ನಾಗಿಸಿದೆ. ಮುಷ್ಕರಗಳನ್ನು ಹುಟ್ಟು ಹಾಕಿದೆ. ರೈತರು, ಕಾರ್ಮಿಕರು, ಮಹಿಳೆಯರು, ದಲಿತರು ಯಾರೂ ಇವರ ಆಡಳಿತದಲ್ಲಿ ನೆಮ್ಮದಿಯಾಗಿಲ್ಲ. ಕಾರ್ಪೋರೇಟ್‌ ಸಿರಿವಂತರು ಮಾತ್ರವೇ ನೆಮ್ಮದಿಯಾಗಿದ್ದಾರೆ ಎಂದು ಹರಿಹಾಯ್ದರು.

ಸರ್ಕಾರದ ವಿಫಲತೆಗಳ ವಿರುದ್ಧ ಶೀಘ್ರದಲ್ಲಿ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಕರಪತ್ರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.