ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ವರ್ಷಧಾರೆಯಾಗಿದ್ದು, ರೈತರು ಸೇರಿದಂತೆ ಗ್ರಾಮೀಣರಲ್ಲಿ ಸಂತಸ ವ್ಯಕ್ತವಾಗಿದೆ.
ಆಷಾಢ ಮಾಸದ ಮೊದಲ ಶುಕ್ರವಾರ ಇದಾಗಿದ್ದು, ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಧಾವಿಸಿದ್ದ ಭಕ್ತ ಸಮೂಹದ ಮೇಲೆ ತುಂತುರು ಸೋನೆ ಮಳೆ ಸುರಿದ ಸಂದರ್ಭ, ಭಕ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು. ನಿರೀಕ್ಷೆಯಂತೆ ವರುಣ ದೇವ ಕೃಪೆ ತೋರಿದ ಎಂಬ ಉದ್ಗಾರ ತೆಗೆದವರು ಹಲವರಾಗಿದ್ದರು.
‘ಎಚ್.ಡಿ.ಕೋಟೆ ತಾಲ್ಲೂಕಿನಾದ್ಯಂತ ಶುಕ್ರವಾರ ಉತ್ತಮ ಮಳೆ ಸುರಿದಿದ್ದು, ರೈತರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ತಿಂಗಳಿನಿಂದ ಸರಿಯಾಗಿ ಮಳೆ ಸುರಿಯದಿದ್ದರಿಂದ ರೈತ ಸಮೂಹ ಕಂಗಾಲಾಗಿತ್ತು. ಹಲವೆಡೆ ಬೆಳೆ ಒಣಗುತ್ತಿದ್ದವು. ಹತ್ತಿ, ಹೊಗೆಸೊಪ್ಪು, ಜೋಳ ಸೇರಿದಂತೆ ಇತರೆ ಬೆಳೆಗಳು ಒಣಗಿವೆ. ಇದೀಗ ಮಳೆಯಾಗಿದ್ದರಿಂದ ಕೆಲ ಬೆಳೆಗಳು ಇಳುವರಿ ಕೊಡಲ್ಲ’ ಎಂದು ರೈತ ಮುಖಂಡ ಕೆ.ಎಂ.ಹಳ್ಳಿ ಮಹದೇಸ್ವಾಮಿ ತಿಳಿಸಿದರು.
‘ಈ ಮಳೆಯಿಂದ ಯಾವುದೇ ಕೆರೆ ಕಟ್ಟೆಗಳು ತುಂಬುವುದಿಲ್ಲ. ಬೀಳುವ ಮಳೆ ನೀರನ್ನು ಭೂಮಿಯೇ ಕುಡಿದುಕೊಳ್ಳುತ್ತದೆ. ಬಿರುಸಿನ ಮಳೆ ಸುರಿದರೆ ಮಾತ್ರ ಕೆರೆ–ಕಟ್ಟೆಗಳು ತುಂಬುತ್ತವೆ’ ಎಂದು ರೈತ ಗುರುಸ್ವಾಮಿ ‘ಪ್ರಜಾವಾಣಿ’ಗೆ ಹೇಳಿದರು.
ವರುಣಾ ಸೇರಿದಂತೆ ಚಿಕ್ಕಹಳ್ಳಿ, ದೇವಲಾಪುರ, ವರಕೋಡು, ವಾಜಮಂಗಲ, ಮೆಲ್ಲಹಳ್ಳಿ ಭಾಗದಲ್ಲಿ ತುಂತುರು ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.