ಮೈಸೂರು: ನಗರದಲ್ಲಿ ಗುರುವಾರ ಬೇಸಿಗೆಯ ಮೊದಲ ಮಳೆಯ ಸಿಂಚನವಾಯಿತು.
ನಗರದ ಅಲ್ಲಲ್ಲಿ ಚದುರಿದಂತೆ ಮಳೆಯಾಯಿತು. ಸಂಜೆ ತಂಗಾಳಿಯೊಡನೆ ವರುಣನ ಆಗಮನವಾಗಿದ್ದು, ಒಂದೆರಡು ಕ್ಷಣಗಳ ಕಾಲವಷ್ಟೇ ತುಂತುರು ಹನಿಗಳು ಉದುರಿದವು. ಇದರಿಂದಾಗಿ ಮಣ್ಣೆಲ್ಲ ಘಮ್ಮೆಂದು ಮುಂಗಾರನ್ನು ನೆನಪಿಸಿತು. ನಂತರದಲ್ಲೂ ಮಳೆ ಬೀಳುವ ನಿರೀಕ್ಷೆ ಇತ್ತಾದರೂ ಜೋರು ಮಳೆಯಾಗಲಿಲ್ಲ.
ನಗರದ ತಾಪಮಾನ ಕಳೆದ ಎರಡು ದಿನದಲ್ಲಿ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ನಷ್ಟು ತಲುಪಿದೆ. ಬಿರು ಬಿಸಿಲಿನಿಂದ ಜನ ಹೈರಾಣಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ತತ್ವಾರ ಉಂಟಾಗಿದೆ. ಇಂತಹ ಹೊತ್ತಿನಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ. ಈ ಬಾರಿ ಮುಂಗಾರು ಫಲಪ್ರದವಾಗಿರಲಿದೆ ಎಂದು ಹವಾಮಾನ ಇಲಾಖೆಯು ಅಂದಾಜು ಮಾಡಿದ್ದು, ಇದು ಜನರಲ್ಲಿ ಆಶಾಭಾವ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.