ADVERTISEMENT

ಮೈಸೂರು: ಭತ್ತದ ನಾಟಿಗೆ ಪೂರಕವಾದ ಮಳೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 1:16 IST
Last Updated 7 ಸೆಪ್ಟೆಂಬರ್ 2020, 1:16 IST
ಮೈಸೂರಿನ ದೊಡ್ಡ ಗಡಿಯಾರದ ಬಳಿ ಭಾನುವಾರ ರಾತ್ರಿ ಗೋಚರಿಸಿದ ವರ್ಷಧಾರೆಯ ಚಿತ್ರಣ
ಮೈಸೂರಿನ ದೊಡ್ಡ ಗಡಿಯಾರದ ಬಳಿ ಭಾನುವಾರ ರಾತ್ರಿ ಗೋಚರಿಸಿದ ವರ್ಷಧಾರೆಯ ಚಿತ್ರಣ   

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಒಂದು ತಾಸಿಗೂ ಹೆಚ್ಚಿನ ಅವಧಿ ವರ್ಷಧಾರೆಯಾಯ್ತು.

ಮೈಸೂರು ನಗರದಲ್ಲಿ ರಾತ್ರಿ ವೇಳೆ ಜೋರಾಗಿ ಮಳೆ ಸುರಿದಿದ್ದರಿಂದ, ಹಲವು ರಸ್ತೆಗಳ ಮೇಲೆ ನೀರು ಹರಿಯಿತು. ಕೆಲ ಹೊತ್ತು ವಾಹನ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.

ಮಳೆ ನೀರಿನಿಂದ ಚರಂಡಿಗಳು ತುಂಬಿ ರಸ್ತೆಯಲ್ಲೆಲ್ಲಾ ನೀರು ಹರಿಯಿತು. ಕೆಲವೊಂದು ರಸ್ತೆಗಳಲ್ಲಿ ಅರ್ಧ ಅಡಿಗೂ ಹೆಚ್ಚಿನ ನೀರು ಹರಿದಿದ್ದು ಕಂಡು ಬಂದಿತು. ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿದ್ದರಿಂದ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು.

ADVERTISEMENT

ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತಗೊಂಡಿದ್ದವು. ರಾತ್ರಿ ವೇಳೆ ರಸ್ತೆ ಬದಿ ಕುರುಕಲು ತಿಂಡಿ, ಪಾನಿಪೂರಿ, ಗೋಬಿ, ಚಾಟ್ಸ್‌, ಊಟ–ಉಪಾಹಾರದ ವಹಿವಾಟು ನಡೆಸುವ ವ್ಯಾಪಾರಿಗಳು ಮಳೆಯಿಂದ ಕಂಗಾಲಾದರು. ಗ್ರಾಹಕರು ಬರದಿದ್ದರಿಂದ ಪರಿತಪಿಸಿದರು.

ತಿ.ನರಸೀಪುರ, ಕೆ.ಆರ್.ನಗರ, ಹುಣಸೂರು, ನಂಜನಗೂಡು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ಪಟ್ಟಣ ಸೇರಿದಂತೆ ಆಯಾ ತಾಲ್ಲೂಕಿನ ವಿವಿಧೆಡೆ ಚದುರಿದಂತೆ ಮಳೆಯಾಗಿದೆ. ಕೆಲವೆಡೆ ಜೋರು ಮಳೆ ಸುರಿದಿದ್ದರೆ, ಹಲವೆಡೆ ಸಾಧಾರಣ ಮಳೆಯಾಗಿದೆ.

ಮೈಸೂರು ತಾಲ್ಲೂಕಿನ ವರುಣಾ, ಜಯಪುರ ಸುತ್ತಮುತ್ತಲೂ ಬಿರುಸಿನಿಂದ ಮಳೆ ಸುರಿದಿದೆ. ಎಚ್‌.ಡಿ.ಕೋಟೆ ತಾಲ್ಲೂಕಿನ ಹಂಪಾಪುರ, ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮಗಳ ಸುತ್ತಮುತ್ತಲೂ ಮಳೆಯಾಗಿದೆ.

ಜಿಲ್ಲೆಯ ಗ್ರಾಮೀಣ ಪರಿಸರದಲ್ಲೂ ಮಳೆಯಾಗಿದ್ದರಿಂದ ರೈತ ಸಮೂಹದಲ್ಲಿ ಹರ್ಷ ವ್ಯಕ್ತವಾಗಿದೆ. ಭತ್ತದ ನಾಟಿ ಮಾಡಿದ್ದವರಿಗೆ, ಮಾಡುತ್ತಿರುವವರಿಗೆ ಈ ಮಳೆ ಪೂರಕವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.