ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರವೂ ಉತ್ತಮ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.
ಎರಡು ವಾರಗಳಿಂದ ಬಿಡುವು ಪಡೆದಿದ್ದ ವರುಣ ಸೋಮವಾರ ಮಧ್ಯಾಹ್ನದಿಂದಲೇ ಅಬ್ಬರಿಸಿದ್ದು, ಸಂಜೆ ಅಲ್ಲಲ್ಲಿ ಜೋರು ಮಳೆಯಾಯಿತು. ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಮೈಸೂರಿನಲ್ಲಿ ಮತ್ತೆ ಮಳೆ ಆರಂಭಗೊಂಡಿದ್ದು, ಸುಮಾರು ಎರಡು ಗಂಟೆ ಕಾಲ ರಭಸದ ಮಳೆಯಾಯಿತು. ಗುಡುಗು–ಸಿಡಿಲಿನ ಅಬ್ಬರವಿಲ್ಲದಿದ್ದರೂ ಜೋರಾದ ಹನಿಗಳು ಧರೆಯನ್ನು ಅಪ್ಪಿದವು.
ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿ ಹರಿದಿತ್ತು. ಮನೆ ಕಡೆ ಹೊರಟವರು ಮಳೆ ನೀರಿನಲ್ಲಿ ತೋಯ್ದರು. ಬೀದಿಬದಿಯ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಅಲ್ಲಲ್ಲಿ ಸಂಚಾರ ದಟ್ಟಣೆಯೂ ಉಂಟಾಯಿತು.
ಗ್ರಾಮೀಣ ಭಾಗದಲ್ಲಿಯೂ ಉತ್ತಮ ಮಳೆ ದಾಖಲಾಗಿದ್ದು, ಹಳ್ಳ–ಕೊಳ್ಳಗಳಿಗೆ ನೀರು ಹರಿದಿದೆ. ಜುಲೈನಲ್ಲಿ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗೆ ಹಿನ್ನಡೆ ಆಗಿತ್ತು. ಇದೀಗ ಉತ್ತಮ ವರ್ಷಧಾರೆಯಿಂದಾಗಿ ಮತ್ತೆ ಕೃಷಿ ಕಾರ್ಯ ಚುರುಕಾಗಲಿದೆ.
ವಯನಾಡ್ ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಕಬಿನಿ ಜಲಾಶಯದ ಒಳಹರಿವು 16 ಸಾವಿರ ಕ್ಯೂಸೆಕ್ಗೆ ಏರಿಕೆಯಾಗಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.