ಹುಣಸೂರು: ಕಳೆದ ವಾರದಿಂದ ಅಲ್ಲಲ್ಲಿ ಬಂದ ಭಾರಿ ಮಳೆಯಿಂದ ಕೃಷಿ ಚಟುವಟಿಕೆಗೆ ಅನುಕೂಲವಾಗಿ ರೈತನ ಮುಖದಲ್ಲಿ ಸಂತಸ ಬೀರಿದೆ.
ಹೌದು... ಮೇ ತಿಂಗಳಲ್ಲಿ ತಾಲ್ಲೂಕಿನ ಬಹುತೇಕ ಎಲ್ಲ ಭಾಗದಲ್ಲೂ ಭಾರಿ ಮಳೆಯಾಗಿ ಕೃಷಿ ಚಟುವಟಿಕೆ ಕಾರ್ಯ ಬಿರುಸುಗೊಂಡಿರುವ ಚಿತ್ರಣ ಕಂಡು ಬಂದಿದೆ.
ಅಲ್ಲದೇ, ‘ತಂಬಾಕು ಮಂಡಳಿ ಹಾಗೂ ರೈತ ಸಮಿತಿ ವತಿಯಿಂದ ಬೇಸಾಯಕ್ಕೆ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ವಿತರಣೆ ಮಾಡಲಾಗಿದೆ. ತಾಲ್ಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಂಡಳಿಯ ಗೋದಾಮಿನಲ್ಲಿ ಸಂಗ್ರಹಿಸಿರುವ ರಸಗೊಬ್ಬರ ಪಡೆಯುವಲ್ಲಿ ರೈತರು ಉತ್ಸುಕರಾಗಿದ್ದಾರೆ.
ಈಗಾಗಲೇ ರೈತರು ವಾಣಿಜ್ಯ ಬೆಳೆ ತಂಬಾಕು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ‘ಮೇ ತಿಂಗಳಲ್ಲಿ ತಂಬಾಕು ಸಸಿ ನಾಟಿಗೆ ಪೂರಕವಾದ ವಾತಾವರಣವಿದೆ. ಉತ್ತಮ ಮಳೆಯೂ ಆಗಿದೆ. ಮೇ 8ರ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಸಂತಸದಿಂದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ’ ಎನ್ನುತ್ತಾರೆ ಅಗ್ರಹಾರದ ರೈತ ಕೆಂಚೇಗೌಡ.
ತಂಬಾಕು ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ಅಧಿಕಾರಿ ಈಶ್ವರ್ ಮಾತನಾಡಿ, ‘ಏಪ್ರಿಲ್ ತಿಂಗಳಲ್ಲಿ ತಾಲ್ಲೂಕಿನಾದ್ಯಂತ 41.1 ಮಿ.ಮಿ ಮಳೆಯಾಗಿದ್ದರಿಂದ ಭೂಮಿ ಹದಗೊಳಿಸಿಕೊಳ್ಳಲು ಸಹಕಾರಿಯಾಗಿತ್ತು. ಮೇ ತಿಂಗಳಲ್ಲಿ ಬುಧವಾರದ ಅಂತ್ಯದವರಗೆ 27.9 ಮಿ.ಮಿ ಮಳೆಯಾಗಿದೆ. ಆದ್ದರಿಂದ ರೈತರು ನಾಟಿ ಕಾರ್ಯ ನಡೆಸಿದ್ದಾರೆ’ ಎಂದು ತಿಳಿಸಿದರು.
ತಂಬಾಕು ಹರಾಜು ಮಂಡಳಿ ನಿರ್ದೇಶಕ ಕಿರಣ್ ಕುಮಾರ್ ಮಾತನಾಡಿ, ಕಳೆದ ವರ್ಷದಿಂದ ರೈತರ ಸಮಿತಿ ರಚಿಸಲಾಗಿದೆ. ಈ ಸಮಿತಿ ಮೂಲಕ ರಸಗೊಬ್ಬರ ಕಂಪನಿಗಳಿಂದ ನೇರವಾಗಿ ಗೊಬ್ಬರ ಖರೀದಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟನ್ ಗೊಬ್ಬರಕ್ಕೆ ಸರಾಸರಿ ₹ 600 ರಿಂದ ₹ 700 ಕಡಿಮೆಯಾಗಿದೆ. ಇದರಿಂದ ರೈತರಿಗೆ ಕಡಿಮೆ ದರದಲ್ಲಿ ಗೊಬ್ಬರ ಸಿಗಲಿದೆ ಎಂದು ಮಾಹಿತಿ ನೀಡಿದರು.
ಗೊಬ್ಬರ ವಿತರಣೆ ಹೇಗೆ?: ಮಂಡಳಿ ನಿಯಮದಂತೆ ಸಿಂಗಲ್ ಬ್ಯಾರನ್ ಹೊಂದಿರುವ ತಂಬಾಕು ಬೆಳೆಗಾರರಿಗೆ 700 ಕೆ.ಜಿ. ಗೊಬ್ಬರ ( 300ಕೆ.ಜಿ ಎಸ್ಓಪಿ, 300 ಕೆ.ಜಿ ಅಮೋನಿಯಂ ಸಲ್ಫೈಟ್ ಹಾಗೂ 100 ಕೆ.ಜಿ ಡಿಎಪಿ) ಹಾಗೂ ಡಬಲ್ ಬ್ಯಾರನ್ ಹೊಂದಿರುವ ಬೆಳೆಗಾರರಿಗೆ ಎರಡು ಪಟ್ಟು ಗೊಬ್ಬರ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ.ಕೋಟೆ ಹಾಗೂ ರಾಮನಾಥಪುರದಲ್ಲಿ 46 ಸಾವಿರ ರೈತರು ತಂಬಾಕು ಬೇಸಾಯದಲ್ಲಿ ತೊಡಗಿದ್ದಾರೆ. 2018ರಲ್ಲಿ 80 ರಿಂದ 86 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆದಿದ್ದರು.
ಈ ಬಾರಿ ಸಕಾಲಕ್ಕೆ ಉತ್ತಮ ಮಳೆಯಾಗಿರುವುದರಿಂದ, ಬೇಸಾಯ ದ ವಿಸ್ತೀರ್ಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹರಾಜು ಮಂಡಳಿ ಹರಾಜು ಅಧೀಕ್ಷಕ ದಿನೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.