ADVERTISEMENT

ಶಿಸ್ತಿನ ಜೀವನದಿಂದ ಸಾಧನೆ: ಶಾಂತಿವ್ರತಾನಂದಜಿ ಮಹಾರಾಜ್‌

ವಿವೇಕಾನಂದರ ಜನ್ಮದಿನಾಚರಣೆ * ಸ್ವಾಮಿ ಶಾಂತಿವ್ರತಾನಂದಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 2:30 IST
Last Updated 13 ಜನವರಿ 2021, 2:30 IST
ಕಾರ್ಯಕ್ರಮದಲ್ಲಿ ಸ್ವಾಮಿ ಶಾಂತಿವ್ರತಾನಂದಜಿ ಮಹಾರಾಜ್‌ ಮಾತನಾಡಿದರು. ಎಸ್‌.ಸಿದ್ದರಾಮಪ್ಪ, ಡಾ.ಎಂ.ಪಿ.ಸದಾಶಿವ, ಡಾ.ಬಿ.ಆರ್‌.ಜಯಕುಮಾರಿ, ಎನ್‌.ಸಂತೋಷ್‌, ಡಾ.ಎ.ಜಿ.ಧರ್ಮೇಶ್‌ ಇದ್ದರು
ಕಾರ್ಯಕ್ರಮದಲ್ಲಿ ಸ್ವಾಮಿ ಶಾಂತಿವ್ರತಾನಂದಜಿ ಮಹಾರಾಜ್‌ ಮಾತನಾಡಿದರು. ಎಸ್‌.ಸಿದ್ದರಾಮಪ್ಪ, ಡಾ.ಎಂ.ಪಿ.ಸದಾಶಿವ, ಡಾ.ಬಿ.ಆರ್‌.ಜಯಕುಮಾರಿ, ಎನ್‌.ಸಂತೋಷ್‌, ಡಾ.ಎ.ಜಿ.ಧರ್ಮೇಶ್‌ ಇದ್ದರು   

ಮೈಸೂರು: ಶಿಸ್ತುಬದ್ಧ ಜೀವನವನ್ನು ರೂಢಿಸಿಕೊಂಡರೆ ಏನು ಬೇಕಾದರೂ ಸಾಧಿಸಬಹುದು ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದಜಿ ಮಹಾರಾಜ್‌ ಹೇಳಿದರು.

ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಎಸ್‌ಬಿಆರ್‌ಆರ್‌ ಮಹಾಜನ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಸ್ವಾತಂತ್ರ್ಯ ಎನ್ನುವುದು ಜವಾಬ್ದಾರಿ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ನಿಮ್ಮ ಜೀವನಕ್ಕೆ, ಕನಸು– ಆಶೋತ್ತರಗಳಿಗೆ ಜವಾಬ್ದಾರರಾಗಿದ್ದೀರಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಇತರರಿಗಾಗಿ ಬದುಕುವುದರಿಂದ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ ಎಂದರು.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಬಾಲಕ ಬಾಬರ್‌ ಅಲೀ ಎಂಬಾತ ವಿವೇಕಾನಂದರ ತತ್ವಗಳಿಂದ ಸ್ಫೂರ್ತಿಗೊಂಡು ಮೇಲ್ಸೇತುವೆ ಕೆಳಗೆ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದ. ಆತ ಇಂದು ಸ್ನಾತಕೋತ್ತರ ಪದವಿ ಓದುತ್ತಿದ್ದು, ಸಾವಿರಾರು ಮಕ್ಕಳಿಗೆ ಪಾಠ ಮಾಡಿದ್ದಾನೆ. 800–900 ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌.ಮಂಜುನಾಥಸ್ವಾಮಿ ಮಾತನಾಡಿ, ‘ವ್ಯಕ್ತಿ ಶಕ್ತಿಯಾಗಿ ಬೆಳೆದು ದೇವರ ಸ್ಥಾನಕ್ಕೆ ತಲುಪಿದವರು ವಿವೇಕಾನಂದರು. ಅವರು ಯುವಕರನ್ನು ಬರೀ ಎಬ್ಬಿಸಲಿಲ್ಲ, ಚಿಂತಿಸುವಂತೆ ಮಾಡಿದ್ದರು. ವೇದ–ಉಪನಿಷತ್‌ಗಳ ಮಹತ್ವವನ್ನು ಎತ್ತಿಹಿಡಿಯುತ್ತಲೇ ಅದರಲ್ಲಿನ ವೈರುಧ್ಯದ ಬಗೆಗೂ ಬೆಳಕು ಚೆಲ್ಲುವಂತೆ ಮಾಡಿದ್ದರು’ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಪಿ.ಸದಾಶಿವ ಮಾತನಾಡಿ, ‘ಭಾರತದ ಮಣ್ಣಿನಲ್ಲಿ ಆಧ್ಯಾತ್ಮಿಕ ಶಕ್ತಿ ಉತ್ತುಂಗದಲ್ಲಿದೆ. ಯುವಕರು ಆಧ್ಯಾತ್ಮಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು. ಬಡವರು, ನಿರ್ಗತಿಕರು, ಅಸಹಾಯಕರಿಗೆ ಕೈಲಾದ ಸಹಾಯ ಮಾಡಬೇಕು. ಹಳ್ಳಿಗಳಲ್ಲಿ ಮೂಲಸೌಕರ್ಯ ಒದಗಿಸಲು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಓಂಪ್ರಕಾಶ್‌, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್‌.ಜಯಕುಮಾರಿ, ಡಿಎಸಿವೈಪಿ ಸದಸ್ಯ ಎನ್‌.ಸಂತೋಷ್‌, ರಾಷ್ಟ್ರೀಯ ಸೇವಾ ಯೋಜನೆ ಘಟಕ–1ರ ಡಾ.ಎ.ಜಿ.ಧರ್ಮೇಶ್‌, ಘಟಕ–2ರ ಡಾ.ಜಿ.ದೊಡರಸಯ್ಯ ಇದ್ದರು.

‘712 ಜಿಲ್ಲೆಗಳಲ್ಲಿ ಯುವ ದಿನ ಆಚರಣೆ’
ದೇಶದಲ್ಲಿ 712 ಜಿಲ್ಲೆಗಳಲ್ಲಿ ನೆಹರು ಯುವ ಕೇಂದ್ರಗಳಿದ್ದು, ಎಲ್ಲೆಡೆ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತಿದೆ. ಯುವ ಜನರನ್ನು ಒಟ್ಟಿಗೆ ಕೊಂಡೊಯ್ಯಬೇಕು ಎಂಬ ವಿಚಾರ ವಿವೇಕಾನಂದರಲ್ಲಿತ್ತು. ಯುವಜನರು ಬದುಕನ್ನು ಅರ್ಥಪೂರ್ಣವಾಗಿ ನಿಭಾಯಿಸುವುದನ್ನು ಕಲಿಯಬೇಕು. ಜಗತ್ತಿನ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್‌.ಸಿದ್ದರಾಮಪ್ಪ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.