ತಿ.ನರಸೀಪುರ: ‘ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಅವರ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು’ ಎಂದು ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಗುರುಭವನದಲ್ಲಿ ಶುಕ್ರವಾರ ನಡೆದ ದೂರು ಸ್ವೀಕಾರ ಹಾಗೂ ತಾಲ್ಲೂಕು ಮಟ್ಟದ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
‘ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಿ, ಕರ್ತವ್ಯ ನಿಮಿತ್ತ ಹೊರ ಹೋಗುವ ವೇಳೆ ಕಡ್ಡಾಯವಾಗಿ ಪುಸ್ತಕದಲ್ಲಿ ದಾಖಲಿಸಿ. ಸಾರ್ವಜನಿಕ ಅರ್ಜಿಗಳು ಬಂದಾಗ ಇಲ್ಲಸಲ್ಲದ ನೆಪ ಹೇಳಿ ಜನರನ್ನು ಅಲೆದಾಡಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ಪಡೆಯಲು ಪುರಸಭೆ ಟೆಂಡರ್ ನೀಡಿದೆ. ಆದರೆ ವ್ಯಾಪಾರಿಗಳಿಗೆ ಪೊಲೀಸ್ ಇನ್ಸ್ಪೆಕ್ಟರ್ ಅನಗತ್ಯ ತೊಂದರೆ ನೀಡುತ್ತಿದ್ದು, ವ್ಯಾಪಾರಿಗಳಿಗೆ ಸಮಸ್ಯೆ ಆಗುತ್ತಿದೆ. ವ್ಯಾಪಾರಕ್ಕೆ ಎಲ್ಲಾ ಕಡೆ ಅವಕಾಶವಿದೆ, ಆದರೆ ಇಲ್ಲಿ ಮಾತ್ರ ಸಮಸ್ಯೆ ಮಾಡುತ್ತಿದ್ದಾರೆ’ ಎಂದು ಪುರಸಭಾ ಸದಸ್ಯ ಮದನ್ ರಾಜ್ ದೂರಿದರು.
ಅನಗತ್ಯ ತೊಂದರೆ ತಪ್ಪಿಸುವಂತೆ ಲೋಕಾಯುಕ್ತರಿಗೆ ಮನವಿ ಮಾಡಿ, ‘ವ್ಯಾಪಾರಿಗಳಿಗೆ ಇದೇ ರೀತಿ ತೊಂದರೆಯಾದಲ್ಲಿ ಬಂದ್ ಮಾಡಿಸಲಾಗುವುದು’ ಎಂದು ಅವರು ಎಚ್ಚರಿಸಿದರು.
20ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ
ದೂರು ಸ್ವೀಕರಿಸಿದ ಬಳಿಕ ಪರಿಶೀಲಿಸಿ ಮಾತನಾಡಿದ ಡಿವೈಎಸ್ಪಿ ವೆಂಕಟೇಶ್, ‘ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಕರ್ತವ್ಯ. ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸುತ್ತೇವೆ. ದೂರುದಾರರಿಗೆ ಯಾವುದೇ ಅನುಮಾನ ಬೇಡ’ ಎಂದು ಹೇಳಿದರು.
ಲೋಕಾಯುಕ್ತ ಇನ್ಸ್ಪೆಕ್ಟರ್ ಉಮೇಶ್, ತಹಶೀಲ್ದಾರ್ ಸುರೇಶಾಚಾರ್, ಇಒ ಅನಂತರಾಜು, ಇನ್ಸ್ಪೆಕ್ಟರ್ ಧನಂಜಯ, ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ಟಿಪಿಒ ರಂಗಸ್ವಾಮಿ, ಎಇಇಗಳಾದ, ಸತೀಶ್ ಚಂದ್ರ, ಚರಿತ, ವೀರೇಶ್, ಶಿವರಾಜು, ಎಡಿಗಳಾದ ರಾಜಣ್ಣ, ಶಾಂತಾ, ಶ್ವೇತಾ, ಶಶಿಕುಮಾರ್, ಪುಟ್ಟಸ್ವಾಮಿ, ಸಿಡಿಪಿಒ ಗೋವಿಂದರಾಜು, ಭೂಮಾಪಾನ ಇಲಾಖೆಯ ಪಂಚಲಿಂಗಪ್ಪ, ಬಿಇಒ ಶಿವಮೂರ್ತಿ, ಅರಣ್ಯ ಇಲಾಖೆ ಅಧಿಕಾರಿ ರಾಜೇಶ್, ಪಿಡಿಒ ಲಿಂಗರಾಜು, ಮಹೇಶ್, ಕೆಂಪೇಗೌಡ, ಚಿದಾನಂದ, ಪುಟ್ಟಸ್ವಾಮಿ, ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.