
ನಂಜನಗೂಡು: ನಗರದ ದೇವಿರಮ್ಮನಹಳ್ಳಿ ವೃತ್ತದ ಬಳಿ ಖಾಸಗಿ ವ್ಯಕ್ತಿಗಳು ಹುರ ಮುಖ್ಯರಸ್ತೆ ಒತ್ತುವರಿ ಮಾಡಿಕೊಂಡು ಹಾಕಿದ್ದ ತಂತಿ ಬೇಲಿಯನ್ನು ನಗರಸಭೆ ಆಯುಕ್ತ ಬಸವರಾಜು ನೇತೃತ್ವದಲ್ಲಿ ಶುಕ್ರವಾರ ಸಿಬ್ಬಂದಿ ತೆರವುಗೊಳಿಸಿದರು.
ನಗರದ ನಂದಿ ಕನ್ವೆನ್ಷನ್ ಕಲ್ಯಾಣ ಮಂಟಪದ ಬಳಿ ಖಾಸಗಿ ವ್ಯಕ್ತಿಗಳು ಮುಖ್ಯ ರಸ್ತೆಯನ್ನು ತಮ್ಮ ಜಾಗವೆಂದು ತಂತಿಬೇಲಿ ಹಾಕಿಕೊಂಡು ಒತ್ತುವರಿ ಮಾಡಿಕೊಂಡಿದ್ದರು. ಸಾರ್ವಜನಿಕರು ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆಗೆ ದೂರು ನೀಡಿದ್ದರು. ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಒತ್ತುವರಿಯಾಗಿರುವ ರಸ್ತೆಯನ್ನು ತೆರವು ಮಾಡುವಂತೆ ನಗರಸಭೆಗೆ ಪತ್ರ ಬರೆದಿದ್ದರು. ರಸ್ತೆ ಮಧ್ಯದಲ್ಲಿ ನಿರ್ಮಿಸಿಕೊಂಡಿದ್ದ ತಂತಿ ಬೇಲಿಗಳನ್ನು ತೆರವುಗೊಳಿಸಲಾಯಿತು.
ನಗರ ಸಭೆ ಆಯುಕ್ತ ಬಸವರಾಜು ಮಾತನಾಡಿ, ‘ಖಾಸಗಿ ವ್ಯಕ್ತಿಗಳು ಯಾವುದೇ ಸರ್ವೆ ಕಾರ್ಯ ನಡೆಸದೆ ಹುರ ಮುಖ್ಯ ರಸ್ತೆಯನ್ನು ತಮ್ಮ ಜಾಗ ಎಂದು ಒತ್ತುವರಿ ಮಾಡಿಕೊಂಡು ತಂತಿ ಬೇಲಿ ನಿರ್ಮಿಸಿಕೊಂಡಿದ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಗರಸಭೆಗೆ ಪತ್ರ ಬರೆದು ರಸ್ತೆ ಹಂಚಿನಿಂದ 6 ಮೀ ವರೆಗೆ ಒತ್ತುವರಿ ತೆರವು ಮಾಡುವಂತೆ ನೀಡಿದ್ದ ಪತ್ರದ ಆದೇಶದಂತೆ, ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ’ ಎಂದರು.
ನಗರಸಭೆಯ ಎಇಇ ಮಹೇಶ್, ಎಇ ಸಮಂತ್, ಆರೋಗ್ಯ ಅಧಿಕಾರಿ ಆದರ್ಶ್, ಮಹೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.