ಎಚ್.ಡಿ.ಕೋಟೆ: ತಾಲ್ಲೂಕಿನ ಕರಿಗಳ ಗ್ರಾಮದ ಮೈಸೂರು ಮುಖ್ಯರಸ್ತೆ ಪಕ್ಕದಲ್ಲಿ ನೀರಿನ ದೊಡ್ಡ ಗುಂಡಿ ನಿರ್ಮಾಣವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ರಸ್ತೆ ಬದಿಯ ಈ ಗುಂಡಿಗೆ ಸಾಕಷ್ಟು ವಾಹನಗಳು ಬಿದ್ದು ಅಫಘಾತಗಳಾಗಿವೆ. ರಸ್ತೆ ಬದಿಯಲ್ಲಿಯೇ ಗುಂಡಿ ಇರುವುದರಿಂದ ಈ ಮಾರ್ಗದಲ್ಲಿ ಹೊಸದಾಗಿ ಬರುವ ಚಾಲಕರಿಗೆ ಗೊತ್ತಾಗದೇ ಅಪಘಾತ ಮಾಡಿಕೊಳ್ಳುತ್ತಿದ್ದಾರೆ.
‘ರಸ್ತೆ ಪಕ್ಕದ ಗುಂಡಿಯಿಂದ ಬಹಳಷ್ಟು ಅಪಘಾತಗಳಾಗಿ ಸಾವು ನೋವು ಸಂಭವಿಸಿವೆ. ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಗುಂಡಿ ಮುಚ್ಚಿಸಲು ಮುಂದಾಗಿಲ್ಲ. ಮುಂದಿನ ದಿನಗಳಲ್ಲಿ ಆಗುವ ತೊಂದರೆ ತಪ್ಪಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಕರಿಗಳ ಗ್ರಾಮದ ನಾಗರಾಜು ಆಗ್ರಹಿಸಿದರು.
‘ಈ ನೀರಿನ ಗುಂಡಿಯಲ್ಲಿಯೇ ಲಾರಿ ಮತ್ತು ಇತರೆ ವಾಹನ ಸವಾರರು ತಮ್ಮ ವಾಹನಗಳನ್ನು ಶುಚಿಗೊಳಿಸಿಕೊಳ್ಳುತ್ತಿದ್ದಾರೆ. ರಸ್ತೆ ಬದಿ ದೊಡ್ಡ ದೊಡ್ಡ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೂ ತೊಂದರೆ ಆಗುತ್ತಿದೆ’ ಎಂದು ಅವರು ಆರೋಪಿಸಿದರು
‘ಇದೇ ಸ್ಥಳದಲ್ಲಿ ಈಚೆಗೆ ಗೂಡ್ಸ್ ವಾಹನ ಅಪಘಾತವಾಗಿ ಕೇರಳ ಮೂಲದ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಹಳ್ಳವನ್ನು ಮುಚ್ಚಿಸದೆ ಹಾಗೆ ಬಿಟ್ಟರೆ ಸಾಕಷ್ಟು ವಾಹನ ಸವಾರರು ಬಿದ್ದು ತೊಂದರೆ ಮಾಡಿಕೊಳ್ಳುತ್ತಾರೆ. ರಸ್ತೆಯೂ ಹಾಳಾಗುತ್ತದೆ’ ಎಂದು ಗ್ರಾಮದ ಸಿದ್ದರಾಮು, ಸುನಿಲ್ ಶರ್ಮಾ ಅವರು ಹೇಳುತ್ತಾರೆ.
‘ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದೇನೆ, ಶೀಘ್ರವೇ ಸರಿ ಪಡಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಜೆ.ಶಿವಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.