ಮೈಸೂರು: ‘ಆರ್ಎಸ್ಎಸ್ ನಿಷೇಧಿಸುವುದು ನೆಹರೂ ಕುಟುಂಬದವರಿಂದಲೇ ಸಾಧ್ಯವಾಗಿಲ್ಲ, ಇನ್ನು ಸಿದ್ದರಾಮಯ್ಯ ಅವರ ಕೈಯಲ್ಲಿ ಆಗುತ್ತಾ?’ ಎಂದು ಮಾಜಿ ಸಂಸದ ಬಿಜೆಪಿಯ ಪ್ರತಾಪ ಸಿಂಹ ಕೇಳಿದರು.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮೂರು ತಿಂಗಳಿಗೊಮ್ಮೆ ಆರ್ಎಸ್ಎಸ್ ನಿಂದಿಸಿ ಅಸ್ತಿತ್ವ ತೋರಿಸುವ ಪ್ರಯತ್ನವನ್ನು ಪ್ರಿಯಾಂಕ್ ಖರ್ಗೆ ಮಾಡುತ್ತಿದ್ದಾರೆ. ಮಳೆ ಸುರಿದರೆ ಎಮ್ಮೆಗೆ ಏನೂ ಆಗುವುದಿಲ್ಲ. ಅಂತೆಯೇ ಪಿಯು ಫೇಲ್ ಆಗಿರುವ ಪ್ರಿಯಾಂಕ್ಗೆ ಎಷ್ಟೇ ಬುದ್ಧಿ ಹೇಳಿದರೂ ಅರ್ಥವಾಗುವುದಿಲ್ಲ. ಪ್ರಚಾರದ ಹುಚ್ಚು, ಗೀಳು ಜಾಸ್ತಿಯಾಗಿ ಈ ರೀತಿ ಆಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಮೈಸೂರಿನಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಬಗ್ಗೆ ಪ್ರಿಯಾಂಕ್ ಧ್ವನಿ ಎತ್ತಿದರಾ? ಕ್ಷೇತ್ರದ ಜನರಿಗೆ ಅಧಾರ್ ಕಾರ್ಡ್ ಕೊಡಿಸುವ ಯೋಗ್ಯತೆ ಇಲ್ಲದವರು ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಾರೆ. ಪಿಎಸ್ಐ ಹಗರಣ, ಬಿಟ್ ಕಾಯಿನ್ ಹಗರಣದ ಎಂದೆಲ್ಲಾ ಮಾತನಾಡಿದಿರಲ್ಲಾ, ಅದನ್ನು ಸಾಬೀತುಪಡಿಸಿದಿರಾ?’ ಎಂದು ಕೇಳಿದರು.
‘ಸಿದ್ದರಾಮಯ್ಯ ಸಮಾಜವಾದಿ ಹೆಸರೇಳಿಕೊಂಡು ಮಜಾವಾದಿ ಆಗಿದ್ದಾರೆ. ಅವರಿಂದ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಮುಚ್ಚಿಸುವುದಕ್ಕೂ ಆಗಿಲ್ಲ. ಕಾಂಗ್ರೆಸ್ನ ಕೂಗು ಮಾರಿಗಳ ಬಾಯಿಯನ್ನಾದರೂ ಮುಚ್ಚಿಸಿ’ ಎಂದರು.
‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೌಡಿ ಥರ ಮಾತನಾಡುವುದು ನಿಲ್ಲಿಸಿ. ಉನ್ನತ ಸ್ಥಾನಕ್ಕೆ ಬೇಕಾದ ಘನತೆ, ಗಾಂಭೀರ್ಯ ಬೆಳೆಸಿಕೊಳ್ಳಿ. ಸ್ಥಳೀಯ ಶಾಸಕರು, ಸಂಸದರಿಗೆ ಗೌರವ ಕೊಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.