
ಸಂತೇಮರಹಳ್ಳಿ: ಸಮೀಪದ ಕಸ್ತೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ದೊಡ್ಡಮ್ಮ ತಾಯಿ ದೇವಸ್ಥಾನದ ಬೀಗ ಒಡೆದ ಕಳ್ಳರು ದೇವಿ ಮೂರ್ತಿಗೆ ಹಾಕಿದ್ದ 1 ಗ್ರಾಂ ಚಿನ್ನ ಹಾಗೂ ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಕಳ್ಳತನ ಮಾಡಿದ್ದಾರೆ.
ಧನುರ್ಮಾಸ ಪೂಜೆ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕ ಮುಂಜಾನೆ 4 ಗಂಟೆಗೆ ದೇವಸ್ಥಾನಕ್ಕೆ ತೆರಳಿದಾಗ ಬೀಗ ಒಡೆದಿರುವುದು ಗೊತ್ತಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಂತೇಮರಹಳ್ಳಿ ವೃತ್ತ ನಿರೀಕ್ಷಕ ಸಾಗರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
2 ವರ್ಷದ ಹಿಂದೆಯೂ ದೇವಸ್ಥಾನ ಬೀಗ ಒಡೆದು ಕಳ್ಳತನವಾಗಿತ್ತು. ಹಾಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು ಎಂದು ಮುಖಂಡರು ತಿಳಿಸಿದರು.
ವೃತ್ತ ನಿರೀಕ್ಷಕ ಸಾಗರ್ ಮಾತನಾಡಿ, ‘ದೇವಸ್ಥಾನದಲ್ಲಿ ಕಳ್ಳತನವಾಗಿರುವ ನಿಮಿತ್ತ ತಂಡ ರಚನೆ ಮಾಡಿ ಕೂಡಲೇ ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಉಪ ತಹಶೀಲ್ದಾರ್ ಮಹದೇವನಾಯಕ, ಗ್ರಾಮ ಆಡಳಿತಾಧಿಕಾರಿ ಅಂಜಲಿ, ಗ್ರಾಮ ಸೇವಕ ವಿವಿಯನ್, ಮುಖಂಡರಾದ ಕಸ್ತೂರು ಬಸವಣ್ಣಗೌಡ್ರು, ಮಾದಪ್ಪ, ಬಸವಣ್ಣಪ್ಪ, ಪ್ರಕಾಶ್, ರೇವಣ್ಣ, ಮಹದೇವಯ್ಯ, ಶಿವಕುಮಾರ್, ಸ್ಟಾಲಿನ್, ಪ್ರೇಮ್ಕುಮಾರ್ ಸೇರಿದಂತೆ ಸುತ್ತಲಿನ ಗ್ರಾಮಗಳ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.