
ಹುಲಿ
ಸರಗೂರು: ತಾಲ್ಲೂಕಿನ ಹಂಚೀಪುರ ಸಮೀಪದ ಜಮೀನಲ್ಲಿ ಶನಿವಾರ ಹುಲಿ ದಾಳಿ ಮಾಡಿ ಎರಡು ಹಸುಗಳನ್ನು ಸಾಯಿಸಿದೆ.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಹನು ಅವರಿಗೆ ಸೇರಿದ ಹಸುಗಳು ಮೃತಪಟ್ಟಿವೆ. ಜಮೀನಲ್ಲಿ ಹಸುಗಳು ಮೇಯುತ್ತಿದ್ದಾಗ ಹುಲಿ ದಾಳಿ ಮಾಡಿ, ಕೊಂದು ಹಾಕಿದೆ. ಹುಲಿ ದಾಳಿ ಮಾಡುತ್ತಿದ್ದಂತೆ ಸುತ್ತಮುತ್ತಲ ರೈತರು ಕೂಗಿಕೊಂಡಿದ್ದರಿಂದ ಹಸುಗಳನ್ನು ಬಿಟ್ಟು ಹುಲಿ ಓಡಿ ಹೋಗಿದ್ದು, ರೈತರು ಭಯಭೀತರಾಗಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಕಳೆದ ನಾಲ್ಕು ತಿಂಗಳುಗಳ ಹಿಂದೆ ಒಂದು ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಆದರೆ ಮತ್ತೆ ಹುಲಿ ಕಾಣಿಸಿಕೊಂಡು ಭಯ ಉಂಟು ಮಾಡಿದೆ. ಹಂಚೀಪುರ, ಜೊರಹಳ್ಳ, ಸಾಗರೆ ಗ್ರಾಮದಲ್ಲಿ ಹುಲಿ ದಾಳಿಗೆ ಜಾನುವಾರು ಬಲಿಯಾಗಿವೆ. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಕೊಂಡು ಹೋಗಿದ್ದಾರೆ. ರೈತರು ಕಚೇರಿಗೆ ಹೋಗಿ ಅರ್ಜಿ ಹಾಕಿದ್ದರೂ ಯಾವುದೇ ಪರಿಹಾರ ಬಂದಿಲ್ಲ. ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯಾಧಿಕಾರಿ ಲೋಕೇಶ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ‘ಚಿರತೆ ಮತ್ತು ಹುಲಿ ಓಡಾಟ ಇತ್ತೀಚೆಗೆ ಹೆಚ್ಚಾಗಿದ್ದು, ಸೆರೆಗೆ ಕ್ರಮ ವಹಿಸಲಾಗುವುದು. ಹಸು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.