ಮೈಸೂರು: ‘ನಮ್ಮ ವೈಯಕ್ತಿಕ ಕಾರಣಕ್ಕೆ ತಾಯಿಯ ಹೆಸರು, ಸನ್ನಿಧಿ ಬಳಸಿಕೊಂಡಿದ್ದಕ್ಕೆ ನೋವಾಗಿದೆ. ಇದಕ್ಕಾಗಿ ಚಾಮುಂಡೇಶ್ವರಿಯ ಕ್ಷಮೆ ಕೋರಿದೆ’ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಶುಕ್ರವಾರ ಇಲ್ಲಿ ತಿಳಿಸಿದರು.
ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್, ಸಾ.ರಾ.ಮಹೇಶ್ ಪರಸ್ಪರ ಆಣೆ–ಪ್ರಮಾಣದ ಪಂಥಾಹ್ವಾನ ನೀಡಿಕೊಂಡಿದ್ದರು. ಅದರಂತೆ ಇಬ್ಬರೂ ಗುರುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಪ್ರಹಸನ ನಡೆಸಿದ್ದರು.
ಶುಕ್ರವಾರ ಬೆಳಿಗ್ಗೆಯೇ ಬೆಟ್ಟಕ್ಕೆ ಭೇಟಿ ನೀಡಿದ ಸಾ.ರಾ.ಮಹೇಶ್ ದೇವಿ ಸನ್ನಿಧಿಯಲ್ಲಿ ಕೆಲ ಹೊತ್ತು ಮೌನವಾಗಿದ್ದರು. ಧ್ಯಾನಸ್ಥರಾಗಿ ಪ್ರಾರ್ಥಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ‘ಸತ್ಯಾಸತ್ಯತೆಯನ್ನು ಅಮ್ಮನೇ ತೀರ್ಮಾನ ಮಾಡ್ತಾಳೆ. ಎಷ್ಟೇ ದೊಡ್ಡವರಾಗಿದ್ದರೂ ಆತ್ಮಸಾಕ್ಷಿಯೇ ಮುಖ್ಯ. ಅದಕ್ಕೆ ನೋವಾಗಿದ್ದಕ್ಕೆ ತಾಯಿ ಸನ್ನಿಧಿಗೆ ಬಂದು ಕ್ಷಮೆ ಕೋರಿದೆ. ಇದೇ ಸಂದರ್ಭ ರಾಜ್ಯದ ಜನರ ಕ್ಷಮೆಯನ್ನು ಕೋರುವೆ’ ಎಂದು ಪ್ರತಿಕ್ರಿಯಿಸಿದರು.
‘ಆತ್ಮಸಾಕ್ಷಿಗಿಂತ ದೊಡ್ಡದು ಯಾವುದು ಇಲ್ಲ. ಎರಡು ತಿಂಗಳಿಂದ ನೊಂದಿದ್ದೇನೆ. ಪಶ್ಚಾತ್ತಾಪದ ಪ್ರಾಯಶ್ಚಿತ್ತಕ್ಕಾಗಿಯೇ ಅಮ್ಮನ ಸನ್ನಿಧಿಗೆ ಮತ್ತೆ ಬಂದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.