ADVERTISEMENT

ಮುಖ್ಯಮಂತ್ರಿ ಆಗಲು ಎಚ್‌ಡಿಕೆ ಭೇಟಿ ಮಾಡಿದ ಸತೀಶ ಜಾರಕಿಹೊಳಿ: ಜಿ.ಟಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 12:16 IST
Last Updated 27 ಮಾರ್ಚ್ 2025, 12:16 IST
   

ಮೈಸೂರು: ‘ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಲು ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೆ ಜೆಡಿಎಸ್‌ನ 18 ಶಾಸಕರ ಬೆಂಬಲ ನೀಡುವಂತೆ ಅವರು ಕೇಳಿರಬಹುದು’ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ನಗರದಲ್ಲಿ ಗುರುವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು ‘ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಸದ್ಯದ ಪರಿಸ್ಥಿತಿ ನೋಡಿದರೆ ಅವರು ಬೇರೆ ಕಾರಣಕ್ಕೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಲ್ಲ. ಮಾಜಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಅಂದರೆ ಅದಕ್ಕೆ ಇದೇ ಕಾರಣ’ ಎಂದರು.

‘ ಒಂದು ವೇಳೆ ಜೆಡಿಎಸ್ ಸತೀಶ್ ಜಾರಕಿಹೊಳಿಗೆ ಬೆಂಬಲ ನೀಡಿದರೂ ನಾನು ತಟಸ್ಥನಾಗಿರುತ್ತೇನೆ. ಈ ವಿಚಾರದಲ್ಲಿ ಮಾತ್ರ ಅಲ್ಲ, ಎಲ್ಲ ವಿಚಾರದಲ್ಲೂ ನಾನು ತಟಸ್ಥ’ ಎಂದರು.

ADVERTISEMENT

ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಛಾಟನೆ ಬಗ್ಗೆ ಪ್ರತಿಕ್ರಿಯಿಸಿ ‘ ಅದು ಬಿಜೆಪಿಯ ಆಂತರಿಕ ವಿಚಾರ. ಮುಂದೆ ಇನ್ನೂ ಏನೇನು ಬೆಳವಣಿಗೆ ನಡೆಯುತ್ತೋ ಕಾದು ನೋಡೋಣ’ ಎಂದರು.

‘ಮಧುಬಲೆ’ ವಿಚಾರವಾಗಿ ಪ್ರತಿಕ್ರಿಯಿಸಿ ‘ ಸದನದಲ್ಲಿ ರಾಜ್ಯದ ಅಭಿವೃದ್ಧಿ ವಿಚಾರ ಚರ್ಚೆ ಆಗಬೇಕಿತ್ತು. ಆದರೆ ಕೇವಲ ಗಲಾಟೆ, ಗದ್ದಲದಲ್ಲೇ ಸದನ ಮುಗಿಯಿತು.

ಸಿದ್ದರಾಮಯ್ಯ ಏನು ಬಜೆಟ್ ಮಂಡನೆ ಮಾಡಿದರೂ ಎಂಬುದೇ ಜನರಿಗೆ ಗೊತ್ತಾಗಲಿಲ್ಲ. ಅಭಿವೃದ್ಧಿ ವಿಚಾರ ಚರ್ಚೆ ಆಗಿದ್ದರೆ ಜನ ಖುಷಿ ಪಡುತ್ತಿದ್ದರು. ಹನಿಟ್ರ್ಯಾಪ್ ಏಕೆ ಆಯಿತು ಎಂಬುದನ್ನು ತನಿಖೆ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.