ADVERTISEMENT

ಮೈಸೂರು: ‘ಪ್ರಶ್ನಿಸದೆ ಒಪ್ಪಬೇಡಿ, ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 16:08 IST
Last Updated 9 ಸೆಪ್ಟೆಂಬರ್ 2022, 16:08 IST
ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಮೂಢನಂಬಿಕೆಗಳು ಮತ್ತು ವಿಜ್ಞಾನ’ ವಿಷಯ ಕುರಿತ ಕಾರ್ಯಾಗಾರವನ್ನು ಭಾರತೀಯ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರನಾಯಕ್ ಉದ್ಘಾಟಿಸಿದರು
ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಮೂಢನಂಬಿಕೆಗಳು ಮತ್ತು ವಿಜ್ಞಾನ’ ವಿಷಯ ಕುರಿತ ಕಾರ್ಯಾಗಾರವನ್ನು ಭಾರತೀಯ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರನಾಯಕ್ ಉದ್ಘಾಟಿಸಿದರು   

ಮೈಸೂರು: ‘ವೈಚಾರಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬಾರದು’ ಎಂದು ಭಾರತೀಯ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರನಾಯಕ್ ಸಲಹೆ ನೀಡಿದರು.

ಇಲ್ಲಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸ್ನಾತಕೋತ್ತರ ಪ್ರಾಣಿವಿಜ್ಞಾನ ವಿಭಾಗದಿಂದ ಐಕ್ಯೂಎಸಿ ಸಹಯೋಗದಲ್ಲಿ ನಡೆದ ‘ಮೂಢನಂಬಿಕೆಗಳು ಮತ್ತು ವಿಜ್ಞಾನ’ ವಿಷಯ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.

‘ವೈಜ್ಞಾನಿಕ ತಳಹದಿಯನ್ನು ಹೊಂದಿಲ್ಲದ ಯಾವುದೇ ವಿಷಯವೂ ಮಾನವನ ಪ್ರಗತಿಗೆ ಪೂರಕವಾದುದಲ್ಲ. ಮಾಯಾಜಾಲದಿಂದ ಯಾವುದನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ಕೈಚಳಕವನ್ನೇ ಮಾಯಾಲೋಕವೆಂದು ಭಾವಿಸಬಾರದು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರೆ ಇವೆಲ್ಲವನ್ನೂ ಹೋಗಲಾಡಿಸಬಹುದು’ ಎಂದರು.

ADVERTISEMENT

‘ಮೂಢನಂಬಿಕೆಗಳು ಸಮಾಜದ ಅಭಿವೃದ್ಧಿಗೆ ಮಾರಕವಾಗಿವೆ. ವೈಜ್ಞಾನಿಕವಾಗಿ ಆಲೋಚಿಸುವ, ತರ್ಕಬದ್ಧವಾಗಿ ಚಿಂತಿಸುವ ಮನೋಭಾವವನ್ನು ನಾವು ರೂಢಿಸಿಕೊಳ್ಳಬೇಕು. ಅಲೌಕಿಕವಾದ ಸಾಮರ್ಥ್ಯ ಯಾರಿಗೂ ಇಲ್ಲ. ಅವುಗಳನ್ನು ನಂಬಬಾರದು. ಇತ್ತೀಚೆಗೆ ವಿದ್ಯಾರ್ಥಿಗಳಿಗೂ ಹುಸಿ ವಿಜ್ಞಾನದ ಚಟವನ್ನು ಹತ್ತಿಸುತ್ತಿರುವುದು ವಿಷಾದನೀಯ. ವೈಜ್ಞಾನಿಕವಾಗಿ ಆಲೋಚಿಸಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ‘ಮೂಢನಂಬಿಕೆಗಳು ಮನೆಯಿಂದಲೇ ಪ್ರಾರಂಭವಾಗುತ್ತಿವೆ. ಪೋಷಕರು ಈ ಬಗ್ಗೆ ಜಾಗೃತರಾಗಬೇಕು. ಹಿಂದೆ ನಮ್ಮ ಹಿರಿಯರು ನಾನಾ ಕಾರಣಗಳಿಂದ ಕೆಲವೊಂದು ನಂಬಿಕೆಗಳನ್ನು ಪಾಲಿಸಿಕೊಂಡು ಬಂದಿದ್ದರು. ಆದರೆ, ಇಂದು ನಾವು ಅವುಗಳ ಬಗ್ಗೆ ಯೋಚಿಸದೆ ಅನುಸರಿಸುತಿದ್ದೇವೆ. ವಿಜ್ಞಾನ ಮುಂದುವರಿದಿದೆ. ಆದ್ದರಿಂದ ನಮ್ಮ ನಂಬಿಕೆಗಳೂ ವಿಜ್ಞಾನದ ಮೇಲೆ ನಿಂತಿರಬೇಕು’ ಎಂದುಹೇಳಿದರು.

ವಿದ್ಯಾರ್ಥಿನಿ ಅಮೃತಾ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರಕುಮಾರ್, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಪಂಡಿತಾರಾಧ್ಯ, ಪ್ರಾಣಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಂ.ರಮ್ಯಶ್ರೀ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.