ADVERTISEMENT

ಬೀಜ ಉತ್ಪಾದನೆ ಹಕ್ಕು; ರೈತರಿಗೇ ಉಳಿಸಿ: ಶ್ರೀಧರ್ ರಾಧಾಕೃಷ್ಣನ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 14:24 IST
Last Updated 1 ಮಾರ್ಚ್ 2026, 14:24 IST
   

ಮೈಸೂರು: ‘ರೈತರ ಜ್ಞಾನ, ಸಾರ್ವಭೌಮತೆಯನ್ನು ವಾಣಿಜ್ಯ ಒಪ್ಪಂದಗಳ ಮೂಲಕ ಮತ್ತೊಂದು ದೇಶಕ್ಕೆ ಒತ್ತೆ ಇಡಬೇಡಿ. ಸುಳ್ಳು ಹೇಳಬೇಡಿ. ಬೀಜ ಮಸೂದೆಯಲ್ಲಿ ಬಿತ್ತನೆ ಬೀಜ ಉತ್ಪಾದಿಸುವ ಹಕ್ಕನ್ನು ರೈತರಿಗೇ ಉಳಿಸಿ’ ಎಂದು ‘ಆಶಾ ಕಿಸಾನ್‌ ಸ್ವರಾಜ್‌’ ಸಂಸ್ಥೆಯ ಸದಸ್ಯ ಶ್ರೀಧರ್ ರಾಧಾಕೃಷ್ಣನ್ ಆಗ್ರಹಿಸಿದರು.

ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ‌ ವಿಶ್ವವಿದ್ಯಾಲಯದಲ್ಲಿ ಭಾನುವಾರ ಮುಕ್ತಾಯವಾದ ‘ಕಿಸಾನ್ ಸ್ವರಾಜ್ ಸಮ್ಮೇಳನ’ದ ಸಮಾರೋಪ ಭಾಷಣ ಮಾಡಿದ ಅವರು, ‘ಅಮೆರಿಕ, ಐರೋಪ್ಯ ಒಕ್ಕೂಟದೊಂದಿಗಿನ ಒಪ್ಪಂದಗಳು ರೈತ ವಿರೋಧಿಯಾಗಿವೆ. ದೇಶದ ಕೃಷಿ ನೀತಿಗಳನ್ನೇ ಬದಲಿಸಲಿವೆ. ಬಿತ್ತನೆ ಬೀಜ– ಕೃಷಿ ಮಾರುಕಟ್ಟೆಯ ನಿಯಂತ್ರಣ, ಜೀವವೈವಿಧ್ಯ ನಾಶ, ಜೀನ್‌ ಎಡಿಟಿಂಗ್, ಹೈಬ್ರೀಡ್‌ ಬೆಳೆಗೆ ಪ್ರೋತ್ಸಾಹ ನೀಡುವ ಅವು ರೈತರಿಗೆ ಸವಾಲನ್ನು ಒಡ್ಡಲಿವೆ’ ಎಂದು ಎಚ್ಚರಿಸಿದರು.

‘ರೈತರ ಜೀವನ ಪ್ರಶ್ನೆಯಷ್ಟೇ ಅಲ್ಲ ದೇಶದ ಜನರು, ಭೂಮಿಯ ಉಳಿವಿನ ಪ್ರಶ್ನೆಯೂ ಆಗಿದೆ. ಸಾವಯವ, ಸುಸ್ಥಿರ ಕೃಷಿ ಬಗ್ಗೆ ಮಾತನಾಡುತ್ತಲೇ ಇಡೀ ಕೃಷಿ ವ್ಯವಸ್ಥೆಯನ್ನೂ ಅಸ್ಥಿರತೆಗೆ ಕೊಂಡೊಯ್ಯುವ ನೀತಿಗಳನ್ನು ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆಯೊಂದಿಗೆ ರೂಪಿಸುತ್ತಿದೆ’ ಆಕ್ಷೇಪಿಸಿದರು.

ADVERTISEMENT

ಹಕ್ಕು ರಕ್ಷಣೆಗೆ ಮುಂದಾಗಿ:

‘ಬಂಡವಾಳಶಾಹಿಗಳು ಆಹಾರ ಮತ್ತು ಕೃಷಿ ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆ. ಅಂತರರಾಷ್ಟ್ರೀಯ ವಾಣಿಜ್ಯ ಒಪ್ಪಂದಗಳು ರೈತರ ಕೃಷಿ ಜ್ಞಾನದ ದತ್ತಾಂಶ, ಬಿತ್ತನೆ ಬೀಜ ಹಾಗೂ ಮಾರುಕಟ್ಟೆಯನ್ನು ನಿಯಂತ್ರಿಸಲಿವೆ. ಹೀಗಾಗಿ, ರೈತರು ತಮ್ಮ ಹಕ್ಕುಗಳ ರಕ್ಷಣೆಗೆ ಹೋರಾಟಕ್ಕೆ ಇಳಿಯಬೇಕು’ ಎಂದರು.

‘ಕೇಂದ್ರ ಸರ್ಕಾರ ಯಾವುದೇ ರೈತ ವಿರೋಧಿ ನೀತಿ ತಂದರೂ, ಕೃಷಿಕರು ತಮ್ಮದೇ ಬೀಜ ಸಂಗ್ರಹ ವ್ಯವಸ್ಥೆ, ಸಾವಯವ ಕೃಷಿ ಪದ್ಧತಿ, ಸಹಕಾರ ತತ್ವದಡಿ ಸಮುದಾಯ ಕೃಷಿ, ತಳ ಹಂತದಲ್ಲಿ ರೈತ ಮಾರುಕಟ್ಟೆ ಸ್ಥಾಪನೆ ಪ್ರತಿರೋಧ ತೋರಬೇಕು. ಆಗ ಮಾತ್ರ ಸರ್ಕಾರವೂ ನಮ್ಮ ಮಾತು ಕೇಳುತ್ತದೆ’ ಎಂದು ಹೇಳಿದರು.

‘ಬಂಡವಾಳಶಾಹಿ ಪರ ಮಾರುಕಟ್ಟೆ ನೀತಿಗಳು ರೈತರನ್ನು ಶೋಷಿಸುತ್ತಿವೆ. ಅಗತ್ಯವಿಲ್ಲದ ಡ್ರೋನ್‌, ತಂತ್ರಜ್ಞಾನ, ವಂಶವಾಹಿ ಡಿಜಿಟಲೀಕರಣ, ಆಹಾರ ಸಾರವರ್ಧನೆಗಳು ಮತ್ತಷ್ಟು ಸಂಕಷ್ಟಕ್ಕೆ ದೂಡಲಿವೆ’ ಎಂದು ಎಚ್ಚರಿಸಿದರು.

ಐಎಎಸ್‌ ಅಧಿಕಾರಿ ದೈವಸೇನಾಪತಿ, ಲೇಖಕ ಪಾಮಯನ್‌, ತಮಿಳುನಾಡು ಸಾವಯವ ರೈತರ ಒಕ್ಕೂಟದ ಸೆಲ್ವಂ ರಾಮಸ್ವಾಮಿ, ಸಾವಯವ ಕೃಷಿ ತಜ್ಞೆ ಜೂಲಿ ಕಾರಿಯಪ್ಪ, ರೈತ ಹಕ್ಕುಗಳ ಕಾರ್ಯಕರ್ತ ರವಿ ಕನ್ನೆಗಂಟಿ, ‘ಆಶಾ’ ಕಾರ್ಯಕರ್ತ ನಚಿಕೇತ ಉಡುಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.