ADVERTISEMENT

ನಗರದಲ್ಲಿ ಸರಣಿ ಪ್ರತಿಭಟನೆ

ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಸೈಕಲ್‌ ಜಾಥಾ: ಸಿದ್ದರಾಮಯ್ಯ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 3:07 IST
Last Updated 8 ಜುಲೈ 2021, 3:07 IST
ಬೆಲೆ ಏರಿಕೆ ವಿರುದ್ಧ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಕಾರ್ಯಕರ್ತರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು
ಬೆಲೆ ಏರಿಕೆ ವಿರುದ್ಧ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಕಾರ್ಯಕರ್ತರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು   

ಮೈಸೂರು: ನಗರದಲ್ಲಿ ಇಂಧನ ಬೆಲೆ ಏರಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಸರಣಿ ಪ್ರತಿಭಟನೆಗಳು ನಡೆದವು.

ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌, ರಾಜ್ಯದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ಸೈಕಲ್ ಜಾಥಾ ಹಮ್ಮಿಕೊಂಡಿತ್ತು. ಮೈಸೂರಿನಲ್ಲಿ ನಡೆದ ಜಾಥಾಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್‌ ಭವನದ ಮುಂಭಾಗ ಚಾಲನೆ ನೀಡಿದರು.

ಸಿದ್ದರಾಮಯ್ಯ ಸೈಕಲ್ ತುಳಿಯಲು ಮುಂದಾದರೂ, ನೂರಾರು ಅಭಿಮಾನಿ ಗಳು ಕಾರ್ಯಕರ್ತರು ನೂಕಾಟ, ತಳ್ಳಾಟ ನಡೆಯಿತು. ನಂತರ ಅವರು ಸೈಕಲ್‌ನಿಂದ ಇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಸೇರಿದಂತೆ ಮುಖಂಡರು ಪಾಲ್ಗೊಂಡರು.

ADVERTISEMENT

ಕಾಂಗ್ರೆಸ್ ಭವನದಿಂದ ಆರಂಭ ವಾದ ಜಾಥಾ ಬಾಬು ಜಗಜೀವನ್ ರಾಂ ಸರ್ಕಲ್ - ಇರ್ವಿನ್ ರಸ್ತೆ- ಅಶೋಕ ರಸ್ತೆ ಮೂಲಕ ಸಾಗಿ ಗಾಂಧಿವೃತ್ತದಲ್ಲಿ ಕೊನೆಗೊಂಡಿತು.

ಎಸ್‌ಯುಸಿಐ ಪ್ರತಿಭಟನೆ: ಬೆಲೆ ಏರಿಕೆ ವಿರುದ್ಧ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಕಾರ್ಯ ಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಅಡುಗೆ ಅನಿಲ, ಅಡುಗೆ ಎಣ್ಣೆ, ಬೇಳೆಕಾಳುಗಳ ಬೆಲೆ ಇಳಿಕೆಗೆ ಒತ್ತಾಯಿಸಿ ಪ್ರಧಾನಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘ ಟನೆಯ ಜಿಲ್ಲಾ ಕಾರ್ಯದರ್ಶಿ ಬಿ.ರವಿ, ’ಅಡುಗೆ ಅನಿಲದ ಸಬ್ಸಿಡಿ ರದ್ಧತಿಯನ್ನು ವಾಪಸ್ ಪಡೆಯಬೇಕು, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡುವ ಮೂಲಕ ಬೆಲೆಗಳನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಚಂದ್ರಶೇಖರ ಮೇಟಿ, ಸಂಧ್ಯಾ, ಸೀಮಾ, ಹರೀಶ್ ಇದ್ದರು.

ಎನ್‌ಟಿಎಂ ಶಾಲೆ; ಪ್ರತಿಭಟನೆ ಮುಂದುವರಿಕೆ: ಎನ್‌ಟಿಎಂ ಶಾಲೆ ಉಳಿಸಿ ಎಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಯ ಹತ್ತನೇ ದಿನವಾದ ಬುಧವಾರ ಭಾರತೀಯ ವಿದ್ಯಾರ್ಥಿ ಸಂಘ ದ ಕಾರ್ಯಕರ್ತರು ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿಯ ಹೋರಾಟಗಾರರೊಂದಿಗೆ ಕೈಜೋಡಿಸಿದರು.

ಶಾಲೆಯ ಮುಂಭಾಗ ಭಿತ್ತಿಪತ್ರಗಳನ್ನಿಡಿದು ಕುಳಿತ ಅವರು, ಶಾಲೆ ಉಳಿಯಲೇಬೇಕು ಎಂದು ಒತ್ತಾಯಸಿ ಘೋಷಣೆ ಕೂಗಿದರು. ನಂತರ, ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ, ಮಾಜಿ ಮೇಯರ್ ಪುರುಷೋತ್ತಮ್, ಶಿವಕುಮಾರ್, ಸೋಸಲೆ ಸಿದ್ಧರಾಜು, ಸೋಸಲೆ ಗಂಗಾಧರ, ಮಹದೇವು, ಜಯಶಂಕರ ಮೇಸ್ತ್ರಿ, ಶ್ರೀನಿವಾಸ, ನಾಗೇಂದ್ರ, ಸಾಗರ, ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಇದ್ದರು.

ಲಸಿಕೆ ನೀಡುವವರೆಗೂ ಪರೀಕ್ಷೆ ಬೇಡ: ವಿದ್ಯಾರ್ಥಿಗಳಿಗೆ ಎರಡು ಡೋಸೆಜ್ ಕೋವಿಡ್ ಲಸಿಕೆ ನೀಡುವವರೆಗೂ ‘ಆಫ್‌ಲೈನ್’ ಪರೀಕ್ಷೆ ಮಾಡಬಾರದು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್ಒ) ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಡಿಪ್ಲೊಮಾ, ಎಂಜಿನಿಯರಿಂಗ್, ಪದವಿ, ಸ್ನಾತಕೋತ್ತರ, ಫಾರ್ಮಸಿ ವಿಭಾಗದ ಕಳೆದ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಒಂದು ತಿಂಗಳಿನಲ್ಲಿ 2 ಸೆಮಿಸ್ಟರ್ ಪರೀಕ್ಷೆಯನ್ನು ಹೇರಬೇಡಿ ಎಂದು ಆಗ್ರಹಿಸಿದ ಅವರು, ಒಂದೇ ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದರು.

ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಆಸಿಯಾಬೇಗಂ ಸೇರಿದಂತೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.