ಮೈಸೂರು: ರದ್ದಾದ ನೋಟುಗಳ ಬದಲಾವಣೆ ಮಾಡುತ್ತಿತ್ತು ಎನ್ನಲಾದ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದ ಎಲ್ಲ 5 ಮಂದಿ ಪೊಲೀಸರನ್ನು ನಗರದ ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಿ ಡಿಸಿಪಿ ಮುತ್ತುರಾಜ್ ಸೋಮವಾರ ಆದೇಶ ಹೊರಡಿಸಿದ್ದಾರೆ.
ವಿಜಯನಗರ ಠಾಣೆಯ ಎಎಸ್ಐ ವೆಂಕಟೇಶ್ಗೌಡ, ಕಾನ್ಸ್ಟೆಬಲ್ಗಳಾದ ಮಹೇಶ್, ವೀರಭದ್ರ, ಈರಣ್ಣ ಹಾಗೂ ಚಾಲಕ ಪುನಿತ್ ವರ್ಗಾವಣೆಗೊಂಡವರು. ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನು ಈಗಾಗಲೇ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಸಿಬ್ಬಂದಿಯೂ ವರ್ಗಾವಣೆಗೊಂಡಿದ್ದಾರೆ.
ಸಿಐಡಿ ತನಿಖೆ ಚುರುಕು:
ಈ ಮಧ್ಯೆ ‘ಶೂಟೌಟ್’ ಪ್ರಕರಣ ಕುರಿತು ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ಸಿಐಡಿ ತಂಡವು ನಗರದಲ್ಲಿ ನಡೆಸುತ್ತಿರುವ ತನಿಖೆಯನ್ನು ಚುರುಕುಗೊಳಿಸಿದೆ.
ಗುಂಡಿನ ದಾಳಿಯನ್ನು ಪ್ರತ್ಯಕ್ಷ ಕಂಡವರ ಕುರಿತು ಮಾಹಿತಿ ಕಲೆ ಹಾಕುತ್ತಿದೆ. ಪ್ರಮುಖವಾಗಿ ಮಾಹಿತಿದಾರರನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ. ಉಳಿದಂತೆ, ಘಟನೆಯನ್ನು ನೋಡಿದ ಮಾಹಿತಿದಾರನ ಕಾರಿನ ಚಾಲಕನನ್ನು ವಿಚಾರಣೆ ನಡೆಸಲಾಗಿದೆ.
ಇವರ ಜತೆಗೆ, ಘಟನೆ ನಡೆದಾಗ ಸುತ್ತಮುತ್ತಲ ಪ್ರದೇಶಗಳ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದನ್ನು ನೋಡಿದ ಸಾರ್ವಜನಿಕರಿಂದ ಮಾಹಿತಿ ಪಡೆಯುವ ಪ್ರಯತ್ನ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.