
ಪ್ರತಾಪ ಸಿಂಹ ಮತ್ತು ಸಿದ್ದರಾಮಯ್ಯ
ಮೈಸೂರು: ‘ನಾನು ದೇವರಾಜ ಅರಸುಗಿಂತ ದೊಡ್ಡವ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಈಗ ನಾಲ್ವಡಿ ಕೃಷ್ಣರಾಜ ಒಡೆಯರ್ಗಿಂತಲೂ ದೊಡ್ಡವರಾಗಿದ್ದಾರೆ. ಮುಖ್ಯಮಂತ್ರಿಯಾಗಿ 10 ವರ್ಷ ಪೂರೈಸಿಬಿಟ್ಟರೆ, ನಾಡದೇವತೆ ಚಾಮುಂಡಿಗಿಂತಲೂ ದೊಡ್ಡವನು ಎಂದುಬಿಡುತ್ತಾರೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಟೀಕಿಸಿದರು.
‘ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ’ ಎಂಬ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಇಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ನಿಮ್ಮಪ್ಪನ ಕೊಡುಗೆ ಏನು ಹೇಳಿ?’ ಎಂದು ಕೇಳಿದರು.
‘ಯತೀಂದ್ರ ‘ಅನಧಿಕೃತ ವರ್ಗಾವಣೆ ಖಾತೆ ಸಚಿವ’ ಎಂದು ಟೀಕಿಸಿದ ಅವರು, ‘ಮಕ್ಕಳಿಗೆ ಆಸ್ತಿ ಮಾಡಿಕೊಡಬಹುದು. ತಲೆಯಲ್ಲಿ ಬುದ್ಧಿ ತುಂಬಿಸಲಾಗದು. ಹೇಳಿಕೆಯು ಯತೀಂದ್ರ ಅವರದಷ್ಟೆ ಅಲ್ಲ. ಸಿದ್ದರಾಮಯ್ಯ ಅವರ ಅಂತರಾಳದ ಭಾವನೆಯೂ ಹೌದು. ಮೈಸೂರು ಮಹಾರಾಜರ ಕುಟುಂಬದ ಬಗ್ಗೆ ಅವರಿಗೆ ದ್ವೇಷ–ಅಪಥ್ಯದ ಭಾವನೆ ಇದೆ’ ಎಂದು ದೂರಿದರು.
‘ಇವರಿಗೆ ಕೆ.ಆರ್. ಆಸ್ಪತ್ರೆಗೆ ಸುಣ್ಣ ಬಳಿಸಲೂ ಆಗಿಲ್ಲ. ಮುಡಾ ನಿವೇಶನ ಹೊಡೆದದ್ದೇ ಕೊಡುಗೆಯೇ? ಉಡಾಫೆ ಮಾತನಾಡಿಕೊಂಡು ಓಡಾಡಿದ್ದೇ ಸಿಎಂ ಸಾಧನೆ. ಯಾರ್ಯಾರು ಏನೇನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಚರ್ಚಿಸೋಣ. ಮುಖ್ಯಮಂತ್ರಿಯೇ ವೇದಿಕೆ ಸಿದ್ಧಮಾಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.