ADVERTISEMENT

ಬೆಂಬಲಿಗನ ಕೆನ್ನೆಗೆ ಬಾರಿಸಿದ ಸಿದ್ದರಾಮಯ್ಯ; ವಿಡಿಯೊ ವೈರಲ್

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 9:27 IST
Last Updated 4 ಸೆಪ್ಟೆಂಬರ್ 2019, 9:27 IST
   

ಮೈಸೂರು: ಮೊಬೈಲ್‌ನಲ್ಲಿ ಮಾತನಾಡುವಂತೆ ಫೋನ್‌ ಕೊಡಲು ಮುಂದಾದ ಬೆಂಬಲಿಗ ಹಾಗೂ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರೊಬ್ಬರ ಕೆನ್ನೆಗೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಾರಿಸಿದ ವಿಡಿಯೊ ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೈಸೂರಿಗೆ ಹೊಂದಿಕೊಂಡಂತಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ನಾಡನಹಳ್ಳಿ ರವಿ ಎಂಬುವರೇ ಕಪಾಳಮೋಕ್ಷ ಮಾಡಿಸಿಕೊಂಡವರು.

ಸಿದ್ದರಾಮಯ್ಯ ಬುಧವಾರ ಮೈಸೂರಿಗೆ ಬಂದಿದ್ದರು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಡಿಕೇರಿಗೆ ಹೊರಡಲು ಅನುವಾಗುತ್ತಿದ್ದಂತೆ, ನಾಡನಹಳ್ಳಿ ರವಿ ಸಿದ್ದರಾಮಯ್ಯ ಅವರಿಗೆ ಮೊಬೈಲ್‌ ನೀಡಲು ಮುಂದಾದರು.

ADVERTISEMENT

ಇದರಿಂದ ಸಿಟ್ಟಾದ ಸಿದ್ದರಾಮಯ್ಯ, ಏಯ್‌ ಎಂದು ಗದರಿ ರವಿ ಕೆನ್ನೆಗೊಂದು ಬಾರಿಸಿ, ಅತ್ತ ಹೋಗು ಎಂದು ತಮ್ಮ ಕೈನಿಂದ ನೂಕಿದ ದೃಶ್ಯ ವಿಡಿಯೊ ಕ್ಲಿಪ್ಪಿಂಗ್‌ನಲ್ಲಿದೆ.

ತಂದೆ ಸಮಾನ: ‘ಮರಿಗೌಡರು ಸಿದ್ದರಾಮಯ್ಯ ಅವರಿಗೆ ಮೊಬೈಲ್‌ ಕೊಡುವಂತೆ ಹೇಳಿದರು. ಅದರಂತೆ ನಾನು ಫೋನ್‌ ಕೊಡಲು ಮುಂದಾದಾಗ, ನಾ ಮಡಿಕೇರಿಗೆ ಹೋಗಬೇಕಿದೆ. ಈಗ ಮಾತನಾಡಬೇಕಾ ? ಎಂದು ನನ್ನನ್ನು ಗದರಿದ ನಾಯಕರು, ಕೆನ್ನೆಗೆ ತಟ್ಟಿದರಷ್ಟೇ. ಅವರು ನನ್ನ ತಂದೆ ಸಮಾನ. ಇದಕ್ಕೆ ಬೇರೆ ಬಣ್ಣ ಕೊಡಬೇಕಿಲ್ಲ’ ಎಂದು ನಾಡನಹಳ್ಳಿ ರವಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.