
ಬೆಟ್ಟದಪುರ : ಗ್ರಾಮೀಣ ಸಂಸ್ಕೃತಿ ಹಾಗೂ ಐತಿಹಾಸಿಕ ಪರಂಪರೆಯನ್ನೊಳಗೊಂಡ ಸಿಡಿಲು (ಶಿಡ್ಲು) ಮಲ್ಲಿಕಾರ್ಜುನ ಸ್ವಾಮಿ ಜಾನುವಾರುಗಳ ಜಾತ್ರಾ ಮಹೋತ್ಸವಕ್ಕೆ ತಹಶೀಲ್ದಾರ್ ನಿಸರ್ಗಪ್ರಿಯ ಶುಕ್ರವಾರ ಚಾಲನೆ ನೀಡಿದರು.
ಗ್ರಾಮದ ಹೊರವಲಯದಲ್ಲಿರುವ ಹರದೂರು ಗೇಟ್ ಬಳಿ ಬಸವೇಶ್ವರ ದೇವಾಲಯದ ಆವರಣಗಳಲ್ಲಿ ಜಾನುವಾರುಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಜಾನುವಾರು ಸಾಕಣೆ ರೈತರ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿದ್ದು, ಇಂತಹ ಜಾತ್ರೆಗಳು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತವೆ. ಜಾನುವಾರುಗಳ ಆರೋಗ್ಯ ಹಾಗೂ ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದ್ದು, ಪಶುವೈದ್ಯರ ತಂಡವನ್ನು ನಿಯೋಜಿಸಿ ಉಚಿತ ಆರೋಗ್ಯ ತಪಾಸಣೆ, ಲಸಿಕೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಾತ್ರಾ ಮೈದಾನದಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ವಾಹನ ನಿಲುಗಡೆ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಒದಗಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಕೆಲ ದಿನಗಳ ಕಾಲ ನಡೆಯಲಿರುವ ಈ ಜಾತ್ರೆಯಿಂದ ರೈತರಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯಿದ್ದು, ಜಾತ್ರೆಗೆ ನಾಡಿನ ವಿವಿಧ ಜಿಲ್ಲೆಗಳಾದ ಕೊಡಗು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಸೇರಿದಂತೆ ಹಲವು ಭಾಗಗಳಿಂದ ಜಾನುವಾರು ವ್ಯಾಪಾರಿಗಳು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪಂಚಾಯಿತಿ ವತಿಯಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಜಾತ್ರೆಯ ಮೈದಾನದಲ್ಲಿರುವ ಪಂಪ್ಸೆಟ್ ವಿದ್ಯುತ್ ಸರಬರಾಜು ಬೆಳಿಗ್ಗೆಯಿಂದ ಸಂಜೆಯ ಆಗಬೇಕು ಎಂದು ರೈತರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಇಇ ಪ್ರಶಾಂತ್, ವಿದ್ಯುತ್ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು ಎಂದರು. ಜಾತ್ರೆ ಸುಗಮವಾಗಿ ನಡೆಯಲಿ, ರೈತರಿಗೆ ಉತ್ತಮ ಲಾಭ ದೊರಕಲಿ ಹಾಗೂ ಜಾನುವಾರುಗಳಿಗೆ ಯಾವುದೇ ತೊಂದರೆ ಆಗದಿರಲಿ ಎಂಬ ಸಂಕಲ್ಪದೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಜಾನುವಾರುಗಳಿಗೆ ಹಣ್ಣು–ಫಲ ನೀಡುವುದರ ಮೂಲಕ ಸಂಪ್ರದಾಯ ಮುಂದುವರಿಸಲಾಯಿತು.
ಉಪ ತಹಶೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಸಂದೀಪ್, ಬೆಟ್ಟದ ಅರ್ಚಕರಾದ ಕೃಷ್ಣಪ್ರಸಾದ್, ಸೆಸ್ಕ್ ಎಇಇ ಪ್ರಶಾಂತ್, ಮಹೇಶ್, ಗ್ರಾಮ ಲೇಖಾಧಿಕಾರಿ ನಿರಂಜನ್, ಗುರುನಾಯಕ್, ಎಲ್ಲಪ್ಪ, ವೀಕ್ಷಿತಾ, ಕಾವ್ಯಾ, ಕುಮುದಾ, ಅಯ್ಯಪ್ಪ, ಶ್ರೀನಿವಾಸ್, ಪಂಚಾಯಿತಿ ಕಾರ್ಯದರ್ಶಿ, ಪಾಂಡು, ಸಿಬ್ಬಂದಿ ಅಣ್ಣಯ್ಯ, ಮುಖಂಡರಾದ ದೇವರಾಜು, ಮೈಲಾರಿಗೌಡ, ಗಣೇಶ್, ಮರೀಗೌಡ, ಕಾಳೇಗೌಡ, ಹರೀಶ್, ಹರದೂರು ಮೈಲಾರಿ ಸೇರಿದಂತೆ ಅಕ್ಕಪಕ್ಕದ ಗ್ರಾಮದ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.