ಹುಣಸೂರು: ತಾಲ್ಲೂಕಿನ ಚಿಟ್ಟಕ್ಯಾತನಹಳ್ಳಿಯ ಯೋಧ ಮಹೇಶ್ (32) ಬುಧವಾರ ಬೆಳಗಿನ ಜಾವ ಗ್ರಾಮದಲ್ಲಿ ಹೃದಯಾಘಾತದಿಂದ ನಿಧನರಾದರು.
‘ಭೂ ಸೇನೆಯಲ್ಲಿ 13 ವರ್ಷದಿಂದ ಸಿಪಾಯಿಯಾಗಿದ್ದ ಅವರು, ಕೋಲ್ಕತ್ತದಲ್ಲಿ ಸೇನೆಯಿಂದ ಒಂದು ತಿಂಗಳು ರಜೆ ಪಡೆದು ಅ.1 ರಂದು ಬಂದಿದ್ದರು. ಮಂಗಳವಾರ ರಾತ್ರಿ 6 ವರ್ಷದ ಮಗಳು ದೀಪ್ತಿ, ಪತ್ನಿ ವಿನೋದ ಅವರೊಂದಿಗೆ ಊಟ ಮಾಡಿ, ಹಿರಿಯರೊಂದಿಗೆ ಮಾತನಾಡಿ ನಿದ್ರೆಗೆ ಜಾರಿದ್ದರು. ಬೆಳಗಿನ ಜಾವ ಕುಡಿಯಲು ನೀರು ಬೇಕು ಎಂದು ಪತ್ನಿಯನ್ನು ಕೇಳಿದ್ದರು. ಬಳಿಕ ಮಲಗಿದ್ದಲ್ಲೇ ಮೃತಪಟ್ಟರು’ ಎಂದು ತಂದೆ ಕೃಷ್ಣೇಗೌಡ ತಿಳಿಸಿದರು. ಗ್ರಾಮದ ಸರ್ಕಾರಿ ಶಾಲೆ– ಕಾಲೇಜಿನಲ್ಲಿ ಓದಿದ್ದ ಅವರು, ಪಿಯುಸಿ ಬಳಿಕ ಸೇನೆ ಸೇರಿದ್ದರು. ಅ. 31 ರಂದು ಸೇನೆಗೆ ಹಿಂದಿರುಗಬೇಕಿತ್ತು.
ತಹಶೀಲ್ದಾರ್ ಡಾ.ಅಶೋಕ್ ಅಂತಿಮ ಗೌರವ ಅರ್ಪಿಸಿದರು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಒಂದು ನಿಮಿಷ ಮೌನ ಆಚರಿಸಿದರು. ಶಾಸಕ ಎಚ್.ಪಿ.ಮಂಜುನಾಥ್, ಮುಖಂಡ ಸಿ.ಟಿ.ರಾಜಣ್ಣ ಅಂತಿಮ ನಮನ ಸಲ್ಲಿಸಿದರು. ಗ್ರಾಮದ ತೋಟದಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಿತು.
ಬುಧವಾರ ನಸುಕಿನಲ್ಲಿ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮಡುಗಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.