ADVERTISEMENT

ಮೈಸೂರು | ಮುನಿದ ವರುಣ; ರಾಗಿ ಬಿತ್ತನೆಗೆ ಹಿನ್ನಡೆ

ಕಾಲುವೆಗಳಲ್ಲಿ ನೀರು; ಭತ್ತದ ನಾಟಿ ಕಾರ್ಯಕ್ಕೆ ರೈತರು ಅಣಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 2:43 IST
Last Updated 5 ಆಗಸ್ಟ್ 2025, 2:43 IST
ಕೆ.ಎಚ್. ರವಿ 
ಕೆ.ಎಚ್. ರವಿ    

ಮೈಸೂರು: ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ಜಮೀನುಗಳ ರೈತರು ಭತ್ತದ ನಾಟಿಯ ಸಿದ್ಧತೆಯಲ್ಲಿದ್ದರೆ, ಜುಲೈನಲ್ಲಿ ವಾಡಿಕೆಗಿಂತ ಕಡಿಮೆ ವರ್ಷಧಾರೆಯಿಂದಾಗಿ ಮಳೆಯಾಶ್ರಿತ ಜಮೀನಿನ ಕೃಷಿಕರು ಚಿಂತಾಕ್ರಾಂತರಾಗಿದ್ದಾರೆ.

ಜುಲೈನಲ್ಲಿ ವಾಡಿಕೆಗಿಂತ ಶೇ 21ರಷ್ಟು ಕಡಿಮೆ ಮಳೆಯಾಗಿದ್ದು, ಒಣ ಬೇಸಾಯಕ್ಕೆ ಹಿನ್ನಡೆ ಆಗಿದೆ. ಅದರಲ್ಲಿಯೂ ಕಳೆದೆರಡು ವಾರದಲ್ಲಿ ಮಳೆ ಕೊರತೆ ತೀವ್ರವಾಗಿದೆ. ಹಳೇ ಮೈಸೂರು ಭಾಗದ ವಿವಿಧ ಜಿಲ್ಲೆಗಳಲ್ಲಿ ಆಗಸ್ಟ್‌ನಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ ಒಟ್ಟು 2.69 ಲಕ್ಷ ಹೆಕ್ಟೇರ್‌ನಷ್ಟು ಒಣಭೂಮಿಯಲ್ಲಿ ಬೇಸಾಯದ ಗುರಿ ಇದೆ. ಇದರಲ್ಲಿ 62 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ರಾಗಿ ಬಿತ್ತನೆಯ ನಿರೀಕ್ಷೆ ಇದ್ದು, ಈವರೆಗೆ ಕೇವಲ 10 ಸಾವಿರ ಹೆಕ್ಟೇರ್‌ನಷ್ಟು ಭೂಮಿಯಲ್ಲಿ ಮಾತ್ರ ಬಿತ್ತನೆ ಆಗಿದೆ. ಹೊಲವನ್ನು ಉತ್ತಿ ಹದಮಾಡಿಕೊಂಡಿರುವ ರೈತರು ಮಳೆಗಾಗಿ ಕಾಯತೊಡಗಿದ್ದಾರೆ.

ADVERTISEMENT

‘ಜುಲೈನಲ್ಲಿ ಮಳೆ ಕೊರತೆಯಿಂದ ರಾಗಿ ಸೇರಿದಂತೆ ಹಲವು ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದ್ದು, ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳೂ ಅಲ್ಲಲ್ಲಿ ಒಣಗುತ್ತಿವೆ. ಆದರೆ ಕಳೆದೆರಡು ದಿನದಿಂದ ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿರುವುದು ಸಮಾಧಾನದ ಸಂಗತಿ. ಆಗಸ್ಟ್‌ನಲ್ಲಿ ರಾಗಿ ಬಿತ್ತನೆ ಚುರುಕು ಪಡೆಯಲಿದ್ದು, ಶೇ 100ರಷ್ಟು ಬಿತ್ತನೆಯಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌. ರವಿ.

ಎಲ್ಲೆಲ್ಲಿ ಹಿನ್ನಡೆ:

ಎಚ್‌.ಡಿ. ಕೋಟೆ, ನಂಜನಗೂಡು, ಸರಗೂರು ತಾಲ್ಲೂಕುಗಳು ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಿಸಿದ್ದು, ಕೆ.ಆರ್. ನಗರ, ಹುಣಸೂರು ಹಾಗೂ ಮೈಸೂರು ತಾಲ್ಲೂಕುಗಳಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಪಿರಿಯಾಪಟ್ಟಣ ಹಾಗೂ ಸಾಲಿಗ್ರಾಮ ತಾಲ್ಲೂಕುಗಳೂ ಮಳೆ ಕೊರತೆ ಎದುರಿಸುತ್ತಿವೆ.

‘ಸಾಮಾನ್ಯವಾಗಿ ಜುಲೈ ಕೊನೆಯ ವಾರದಲ್ಲಿ ರಾಗಿ ಬಿತ್ತನೆ ಮಾಡುತ್ತಿದ್ದೆವು. ಈ ವರ್ಷವೂ ಹೊಲ ಹಸನು ಮಾಡಿ, ಬಿತ್ತನೆ ಬೀಜ ಖರೀದಿಸಿ ಕಾಯುತ್ತಿದ್ದೇವೆ. ಆದರೆ ನಮ್ಮ ಭಾಗದಲ್ಲಿ ಕಳೆದೆರಡು ವಾರದಿಂದಲೂ ಮಳೆ ಬಿದ್ದಿಲ್ಲ. ಇನ್ನಷ್ಟು ದಿನ ಮಳೆ ಬಾರದಿದ್ದರೆ ಈ ವರ್ಷ ಕೃಷಿ ಕಾರ್ಯವನ್ನೇ ಕೈಚೆಲ್ಲಬೇಕಾದಿತು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮೈಸೂರು ತಾಲ್ಲೂಕಿನ ಗುಂಗ್ರಾಲ್‌ ಛತ್ರ ನಿವಾಸಿ ಪ್ರವೀಣ್‌.

ನಾಟಿಗೆ ಸಿದ್ಧತೆ:

ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳು ಈ ಬಾರಿ ಮುಂಗಾರಿನ ಆರಂಭದಲ್ಲೇ ಭರ್ತಿ ಆಗಿದ್ದು, ಕಾಲುವೆಗಳಿಗೆ ನೀರು ಹರಿದಿದೆ. ಹೀಗಾಗಿ ರೈತರು ಭತ್ತದ ಸಸಿ ಮಡಿ ಮಾಡಿಟ್ಟುಕೊಳ್ಳುತ್ತಿದ್ದು, ಅಲ್ಲಲ್ಲಿ ಬಿತ್ತನೆ ಕಾರ್ಯವೂ ಆರಂಭ ಆಗಿದೆ.

ಜಿಲ್ಲೆಯಲ್ಲಿ 89 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದು, ಕೆ.ಆರ್. ನಗರ, ನಂಜನಗೂಡು, ತಿ. ನರಸೀಪುರ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಕೃಷಿ ನಡೆದಿದೆ. ಆದರೆ ಕೃಷಿ ಕಾರ್ಮಿಕರ ಕೊರತೆಯಿಂದಾಗಿ ನಾಟಿ ಕಾರ್ಯ ವಿಳಂಬ ಆಗುತ್ತಿದೆ.

ಮಳೆ ಕೊರತೆಯಿಂದ ಈವರೆಗೆ 10 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ರಾಗಿ ಬಿತ್ತನೆ ಆಗಿದೆ. ಆಗಸ್ಟ್‌ನಲ್ಲಿ ಉತ್ತಮ ಮಳೆಯಾದಲ್ಲಿ ಬಿತ್ತನೆ ಕಾರ್ಯ ಚುರುಕಾಗಲಿದೆ
ಕೆ.ಎಚ್‌. ರವಿ ಜಂಟಿ ಕೃಷಿ ನಿರ್ದೇಶಕ

ಸದ್ಯಕ್ಕಿಲ್ಲ ಯೂರಿಯಾ ಕೊರತೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಯೂರಿಯಾ ರಸಗೊಬ್ಬರ ಕೊರತೆ ಉಂಟಾಗಿದ್ದು ಜಿಲ್ಲೆಯ ರೈತರೂ ಆತಂಕದಿಂದ ಮುಂಗಡವಾಗಿ ಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ಕೆಲವು ಮಳಿಗೆಗಳಲ್ಲಿ ದಾಸ್ತಾನು ಖಾಲಿ ಎಂಬ ಉತ್ತರವೂ ಸಿಗುತ್ತಿದೆ. ಆದರೆ ಜಿಲ್ಲೆಯಲ್ಲಿ ಸದ್ಯಕ್ಕೆ ರಸಗೊಬ್ಬರದ ಕೊರತೆ ಇಲ್ಲ. ರೈತರು ಆತಂಕ ಪಡುವ ಅಗತ್ಯವೂ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ‘ಸೋಮವಾರವೂ ಜಿಲ್ಲೆಗೆ 510 ಟನ್‌ನಷ್ಟು ಯೂರಿಯಾ ಪೂರೈಕೆ ಆಗಿದ್ದು ಒಟ್ಟಾರೆ 7300 ಟನ್‌ನಷ್ಟು ದಾಸ್ತಾನು ಇದೆ. ರೈತರು ಎಲ್ಲಿಯಾದರೂ ಯೂರಿಯಾ ಕೊರತೆ ಇದ್ದಲ್ಲಿ ಕೃಷಿ ಇಲಾಖೆಗೆ ಮಾಹಿತಿ ನೀಡಿದರೆ ಪೂರೈಕೆ ಮಾಡುತ್ತೇವೆ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಕೆ.ಎಚ್‌. ರವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.