ನಂಜನಗೂಡು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಕೇಂದ್ರವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಚ್.ಎಮ್. ಕೆಂಡಣ್ಣಪ್ಪ ಹೇಳಿದರು.
ತಾಲ್ಲೂಕಿನ ನೆಲ್ಲಿತಾಳಾಪುರ ಗ್ರಾಮದಲ್ಲಿ ಶುಕ್ರವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳ ಅಭಿವೃದ್ಧಿಗೆ ಸಂಘದ ಸದಸ್ಯರ ಸಹಕಾರ ಅತ್ಯಗತ್ಯ. ಸಂಘದಿಂದ ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಸಂಘವು ಬೆಳೆಯಲು ಸಾಧ್ಯವಾಗುತ್ತದೆ. ಸಾಲ ಪಡೆದ ಸದಸ್ಯರು ಸುಸ್ತಿದಾರರಾಗದೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು. ಇದರಿಂದ ಇತರ ಸದಸ್ಯರಿಗೆ ಸಾಲ ವಿತರಿಸಲು ಅನುಕೂಲವಾಗುತ್ತದೆ. ಸಂಘಗಳು ಬೆಳೆಯಲು ಆಡಳಿತ ನಿರ್ದೇಶಕರು ಹಾಗೂ ಸರ್ವ ಸದಸ್ಯರ ಸಂಪೂರ್ಣ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೂಸೇಗೌಡ, ನಿರ್ದೇಶಕರಾದ ಸಿ .ರವೀಂದ್ರ, ವೀರಭದ್ರಪ್ಪ, ಮಲ್ಲಿಗಮ್ಮ, ಚಿಕ್ಕವೆಂಕಟ ಶೆಟ್ಟಿ, ಹನುಮೇಶ್, ಸುಧಾ ಮಣಿ, ರಾಮದಾಸಯ್ಯ, ಸಣ್ಣಪ್ಪ, ಮಾದೇವಯ್ಯ, ಪುಟ್ಟಸ್ವಾಮಿ, ಬ್ಯಾಂಕ್ ಪ್ರತಿನಿಧಿ ನಿರಂಜನ್, ಮುಖಂಡರಾದ ಅಂಗಡಿ ನಾಗಣ್ಣ, ಹರದನಹಳ್ಳಿ ಸೋಮೇಶ್, ಜಯರಾಮ್ ಶೆಟ್ಟಿ, ಮಲ್ಲಿಕಾರ್ಜುನಪ್ಪ, ಮಾದೇನಹಳ್ಳಿ ಸಂಗರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.