ಮೈಸೂರು: ‘ಮಹಾತ್ಮ ಗಾಂಧೀಜಿ ಹತ್ಯೆಯ ವಿಚಾರವೇ ಬೇರೆ, ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣವೇ ಬೇರೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದರು.
ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ವಿಧಾನಸಭೆಯ ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಗೌರವ–ತೂಕವಿದೆ. ಆದರೆ, ಕೋವಿಡ್ ನಂತರದಲ್ಲಿ ಸಿದ್ದರಾಮಯ್ಯ ವಿವಾದಾತ್ಮಕ ಮಾತುಗಳನ್ನೇ ಆಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿದ್ದು, ಕೊಡಗು ಭೂಕುಸಿತದಿಂದ ತತ್ತರಿಸಿದ್ದ ವೇಳೆ ಸಿದ್ದರಾಮಯ್ಯ ಅಲ್ಲಿಗೆ ಹೋಗದೆ ಇದ್ದಿದ್ದರಿಂದ ಕೊಡಗಿನ ಜನರಿಗೆ ಅವರ ಮೇಲೆ ಆಕ್ರೋಶವಿದೆ. ಅತಿವೃಷ್ಟಿ ಉಂಟಾದಾಗಲೇ ಸಿದ್ದರಾಮಯ್ಯ ಅಲ್ಲಿಗೆ ಹೋಗಿ ಕಷ್ಟ ಕೇಳಿದ್ದರೆ ಜನರು ಅವರ ಮೇಲೆ ಮೊಟ್ಟೆ ಎಸೆಯುತ್ತಿರಲಿಲ್ಲ. ಆ ಜನ ಸಂಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಹುಟ್ಟುಹಬ್ಬದ ಸಂಭ್ರಮೋತ್ಸದ, ಸುಖದ ಸುಪ್ಪತ್ತಿಗೆಯಲ್ಲಿ ಮೈ ಮರೆತಿದ್ದರು’ ಎಂದು ವ್ಯಂಗ್ಯವಾಡಿದರು.
‘ಹತ್ಯೆ ಮಾಡುವಂತಹ ವಾತಾವರಣ ಕರ್ನಾಟಕಕ್ಕೆ ಇನ್ನೂ ಬಂದಿಲ್ಲ. ಸಿದ್ದರಾಮಯ್ಯ ಅವರಿಗೆ ಅಭದ್ರತೆ ಬೇಡ. ಆರಾಮಾಗಿ ಅವರ ಕೆಲಸ ಮಾಡಲಿ. ಪೊಲೀಸರು ಭದ್ರತೆ ಕೊಡುತ್ತಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.