
ಮೈಸೂರು: ಬೆಂಗಳೂರಿನ ಕರ್ನಾಟಕ ಗಾನಕಲಾ ಪರಿಷತ್ತು ಹಾಗೂ ಗಾನಭಾರತಿ ವೀಣೆ ಶೇಷಣ್ಣ ಭವನದ ಸಹಯೋಗದಲ್ಲಿ ನ.5ರಿಂದ 9ರವರೆಗೆ ಕುವೆಂಪುನಗರದ ಗಾನಭಾರತಿ ರಮಾಗೋವಿಂದ ಕಲಾ ವೇದಿಕೆಯಲ್ಲಿ 54ನೇ ಹಿರಿಯ ಸಂಗೀತ ವಿದ್ವಾಂಸರ ಮತ್ತು 36ನೇ ಯುವ ಸಂಗೀತ ವಿದ್ವಾಂಸರ ರಾಜ್ಯ ಸಂಗೀತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರನನ್ನಾಗಿ ಸಿ.ಎ. ಶ್ರೀಧರ, ಯುವ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರನ್ನಾಗಿ ಮತ್ತೂರು ಆರ್. ಶ್ರೀಧರ್ ಮತ್ತು ತಜ್ಞರ ಸಮಿತಿಯ ಅಧ್ಯಕ್ಷರನ್ನಾಗಿ ಕಲಾವತಿ ಅವಧೂತ್ ಅವರನ್ನು ಆಯ್ಕೆ ಮಾಡಲಾಗಿದೆ.
5ರಂದು ಬೆಳಿಗ್ಗೆ 9.30ರಿಂದ ಹರೀಶ್ ಪಾಂಡವ್ ಅವರಿಂದ ಸ್ಯಾಕ್ಸೊಫೋನ್ ವಾದನ ಪ್ರಸ್ತುತಿ ಇದೆ. 10.30ಕ್ಕೆ ಉದ್ಘಾಟನೆಯನ್ನು ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್ ಉದ್ಘಾಟಿಸುವರು. ಸಂಜೆ 4.15ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದೆ.
ನ.6ರಿಂದ 8ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ವಿದ್ವತ್ ಗೋಷ್ಠಿ ನಡೆಯಲಿದ್ದು, ತಜ್ಞರು ವಿವಿಧ ವಿಷಯಗಳನ್ನು ಮಂಡಿಸುವರು. ಸಂಜೆ 4.15ಕ್ಕೆ ಸಂಗೀತ ಕಾರ್ಯಕ್ರಮ ಜರುಗಲಿದೆ.
9ರಂದು ಬೆಳಿಗ್ಗೆ 10.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಿ.ಎ. ಶ್ರೀಧರ ಅವರಿಗೆ ‘ಗಾನಕಲಾಭೂಷಣ’ ಬಿರುದು ಮತ್ತು ‘ವಾದಿರಾಜ ಪ್ರಶಸ್ತಿ’ ಹಾಗೂ ಮತ್ತೂರು ಆರ್. ಶ್ರೀಧರ್ ಅವರಿಗೆ ‘ಗಾನಕಲಾಶ್ರೀ’ ಬಿರುದು ಹಾಗೂ ‘ರಾಮಸುಧಾ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಹಾಗೂ ಬೆಂಗಳೂರಿನ ವಾಣಿ ವಿದ್ಯಾಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಆರ್.ಎಚ್. ಶಾರದಾಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಂಗೀತ ಸಾಧನೆಗಾಗಿ ಕೆ.ಆರ್. ವೆಂಕಟೇಶ್, ಎಲ್. ಲೀಲಾ, ಕೋವಿಲಾಡಿ ಆರ್. ಕಲಾ, ಹೊಸಹಳ್ಳಿ ಕೆ.ಸುಬ್ಬರಾವ್, ಎಂ.ಆರ್. ಅನಂತರಾಜು ಹಾಗೂ ಎಚ್.ಎನ್. ಸುರೇಶ್ ಅವರಿಗೆ ‘ವಿದ್ವತ್ ಸದಸ್’ ಸನ್ಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.