ಮೈಸೂರು: ‘ಅಂಕಿ–ಅಂಶಗಳು ನೀತಿ–ನಿರೂಪಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎಸ್.ಧನುಷ್ ತಿಳಿಸಿದರು.
ಸಾಂಖ್ಯಿಕ ತಜ್ಞ, ಅಂಕಿ-ಅಂಶಗಳ ಪಿತಾಮಹ ಪ್ರೊ.ಪ್ರಶಾಂತಚಂದ್ರ ಮಹಾಲನೋಬಿಸ್ ಜನ್ಮದಿನ ಅಂಗವಾಗಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿನ ಆಡಳಿತ ತರಬೇತಿ ಸಂಸ್ಥೆಯ ಹೇಮಾವತಿ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 16ನೇ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ವಿವಿಧ ಇಲಾಖೆಗಳ ಸಂಗ್ರಹಿಸುವ ಅಂಕಿಅಂಶಗಳು ನಿಖರವಾಗಿರಬೇಕು. ತಾಲ್ಲೂಕು ಯೋಜನಾಧಿಕಾರಿಗಳು ಕಾರ್ಯ ಯೋಜನೆ ತಯಾರಿಸುವಾಗ 17 ಸುಸ್ಥಿರ ಅಭಿವೃದ್ಧಿ ಗುರಿಗಳ ಪೈಕಿ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆಯ ವಿಷಯಕ್ಕೆ ಆದ್ಯತೆ ಕೊಡಬೇಕು’ ಎಂದರು.
ಮಾನಸಗಂಗೋತ್ರಿಯ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ನವಿತಾ ತಿಮ್ಮಯ್ಯ ಉಪನ್ಯಾಸ ನೀಡಿದರು.
ಎಎನ್ಎಸ್ಎಸ್ಐಆರ್ಡಿ ಜಂಟಿ ನಿರ್ದೇಶಕ ಎಂ.ಬಿ. ಪದ್ಮಶೇಖರ್ ಪಾಂಡೆ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.