
ಮೈಸೂರು: ‘ವಿದೇಶದಲ್ಲಿ ವ್ಯಾಪಾರ ವಿಸ್ತರಣೆಗೆ ಮುಂದಾಗುವವರಿಗೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಗತ್ಯ ಸಹಕಾರ ನೀಡಲಿದೆ’ ಎಂದು ಸಂಸ್ಥೆ ಉಪಾಧ್ಯಕ್ಷ ಆರ್.ಆನಂದ್ ಹೇಳಿದರು.
ನಗರದಲ್ಲಿ ಸಂಸ್ಥೆಯಿಂದ ಥೈಲ್ಯಾಂಡ್ ಸರ್ಕಾರದ ಬೋರ್ಡ್ ಆಫ್ ಇನ್ವೆಸ್ಟ್ಮೆಂಟ್ (ಬಿಒಐ) ಸಹಯೋಗದಲ್ಲಿ ಮಂಗಳವಾರ ನಡೆದ ಸಂವಾದ ಸಭೆಯಲ್ಲಿ ಮಾತನಾಡಿದರು.
‘ಸಂಘದ ಸದಸ್ಯರು ರಫ್ತು ವ್ಯವಹಾರ ಅಭಿವೃದ್ಧಿಗೆ ಇಂಥ ಸಂವಾದಗಳಲ್ಲಿ ಅಗತ್ಯ ಮಾಹಿತಿ ಪಡೆಯಬೇಕು. ಸಂಪರ್ಕ ವೃದ್ಧಿಗೆ ಮುಂದಾಗಬೇಕು’ ಎಂದರು.
ಗೌರವ ಕಾರ್ಯದರ್ಶಿ ಶಿವಾಜಿರಾವ್ ಎ.ಕೆ. ಮಾತನಾಡಿ, ‘ಭಾರತ ಮತ್ತು ಥೈಲ್ಯಾಂಡ್ ನಡುವಿನ ದ್ವಿಪಕ್ಷೀಯ ವಾಣಿಜ್ಯ ಸಂಬಂಧಗಳು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಾರ ಮತ್ತು ವ್ಯವಹಾರಗಳಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸಿದೆ’ ಎಂದು ಹೇಳಿದರು.
ಸಭೆಯಲ್ಲಿ ಬಿಒಐ ಡೈರೆಕ್ಟರ್ ಕಾನ್ಸಲ್ ನಕ್ರಿಸೋನ್ ಕ್ಲೈಕಿಯೋ ಮಾತನಾಡಿ, ‘ಥೈಲ್ಯಾಂಡ್ನಲ್ಲಿ ಲಭ್ಯವಿರುವ ವ್ಯವಹಾರ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಭಾರತದ ಕನ್ಸಲ್ಟೆಂಟ್ ಪೂಜಾ ಮಿಮ್ರೋಟ್ ಮಾತನಾಡಿದರು. ವಿವಿಧ ಕ್ಷೇತ್ರಗಳ ಸುಮಾರು 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.