ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದಲ್ಲಿ ಕಪಿಲಾ ನದಿಯ ತಟದಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರವಾದ ‘ವೀರಸಿಂಹಾಸನ ಮಹಾಸಂಸ್ಥಾನ ಮಠ’ (ಸುತ್ತೂರು ಶ್ರೀಕ್ಷೇತ್ರ)ಕ್ಕೆ ‘ಪ್ರವಾಸಿ ತಾಣ’ ಮಾನ್ಯತೆಯ ಮುದ್ರೆ ಬಿದ್ದಿದೆ.
ರಾಜ್ಯ ಸರ್ಕಾರವು 2024–29ನೇ ಪ್ರವಾಸೋದ್ಯಮ ನೀತಿಯ ಅಡಿಯಲ್ಲಿ ಜಿಲ್ಲಾವಾರು ಪ್ರವಾಸಿ ತಾಣಗಳಿಗೆ ಅನುಮೋದನೆ ನೀಡಿದ್ದು, ಇದರಲ್ಲಿ ಜಿಲ್ಲೆಯ ಸುತ್ತೂರು ಶ್ರೀಕ್ಷೇತ್ರ ಸೇರಿದಂತೆ ಹೊಸದಾಗಿ ಒಟ್ಟು 13 ಸ್ಥಳಗಳನ್ನು ಸೇರ್ಪಡೆ ಮಾಡಲಾಗಿದೆ. ಇದರೊಂದಿಗೆ, ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಸಂಖ್ಯೆ ಹೆಚ್ಚಾದಂತಾಗಿದೆ. ಈಗ ಸೇರ್ಪಡೆಯಾಗಿರುವ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ದೇವಾಲಯಗಳ ಸಂಖ್ಯೆಯೇ ಜಾಸ್ತಿ ಇರುವುದು ವಿಶೇಷ. ಜೊತೆಗೆ, ವಿಶಿಷ್ಟವಾದ ಸ್ಥಳಗಳತ್ತ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಳ್ಳಲಾಗಿದೆ.
ಸೂಚಿಸಲಾಗಿತ್ತು:
ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ನೂತನ ಪ್ರವಾಸಿ ತಾಣಗಳನ್ನು ಗುರುತಿಸಲು ಕ್ರಮ ವಹಿಸಲಾಗಿತ್ತು. ಆಯಾ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಮತ್ತು ಹೆಚ್ಚು ಪ್ರವಾಸಿಗರು ಭೇಟಿ ನೀಡುವ, ಮನೆ ಮಾತಾಗಿರುವ ಪ್ರಮುಖ ಪ್ರವಾಸಿ ತಾಣಗಳನ್ನು ಆದ್ಯತಾವಾರು ಪಟ್ಟಿ ಮಾಡಲಾಗಿತ್ತು. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಯಿಂದ ಆಯಾ ಜಿಲ್ಲೆಗಳ ಪ್ರವಾಸಿ ತಾಣಗಳ ಮಾಹಿತಿ ಪಡೆಯಲಾಗಿತ್ತು. ಮೈಸೂರು ಜಿಲ್ಲೆಯಿಂದಲೂ ಈಚೆಗೆ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಹೊಸ ತಾಣಗಳನ್ನು ಗುರುತಿಸಿ ಪ್ರಸ್ತಾವ ಸಲ್ಲಿಸಿತ್ತು. ಈ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡುವ ಅಂಕಿ–ಅಂಶ ವಿವರ ಹಾಗೂ ಚಿತ್ರಗಳನ್ನು ಸಲ್ಲಿಸಲಾಗಿತ್ತು. ಇವುಗಳಿಗೆ ಸರ್ಕಾರ ಅಂಕಿತ ಹಾಕಿದೆ.
‘ಈ ಸ್ಥಳಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಅನುದಾನ ಲಭ್ಯತೆಯ ಅನುಸಾರ, ವಿವರವಾದ ಕ್ರಿಯಾಯೋಜನೆ ರೂಪಿಸಿಕೊಂಡು ಅಂದಾಜುಪಟ್ಟಿ, ನಕ್ಷೆ ಸಿದ್ಧಪಡಿಸಿ ತಾಂತ್ರಿಕ ಪರಿಶೀಲನೆಗೆ ಒಳಪಡಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ಕಡ್ಡಾಯವಾಗಿ ಪಡೆಯಬೇಕು’ ಎಂದು ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಡಾ.ಕೆ.ವಿ.ರಾಜೇಂದ್ರ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರವೂ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ವಿಶ್ವವಿಖ್ಯಾತ ಪ್ರವಾಸಿ ತಾಣಗಳಿವೆ. ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟ ಹೀಗೆ.... ಹಲವು ಇವೆ.
ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳಿದ್ದರೆ ಅವುಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಸಿಗುವ ಅವಕಾಶಗಳನ್ನು ನೀತಿಯಲ್ಲಿ ಒದಗಿಸಲಾಗಿದೆ. ಆ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ.
ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಆಧರಿಸಿ...
ಪ್ರಶಾಂತ ಹಾಗೂ ಆಹ್ಲಾದಕರ ವಾತಾವರಣ ಹೊಂದಿರುವ ಸುತ್ತೂರು ಶ್ರೀಕ್ಷೇತ್ರಕ್ಕೆ ಭಕ್ತರೊಂದಿಗೆ ಪ್ರವಾಸಿಗರು ಕೂಡ ಭೇಟಿ ನೀಡುತ್ತಾರೆ. ಅಲ್ಲಿನ ಶಿವರಾತ್ರೀಶ್ವರ ಶಿವಯೋಗಿಗಳ ಗದ್ದುಗೆಗೆ ನಮನ ಸಲ್ಲಿಸುವ ಜೊತೆಗೆ ಕ್ಷೇತ್ರದಲ್ಲಿ ಸುತ್ತಾಡುತ್ತಾರೆ. ಕಪಿಲಾ ನದಿ ದಂಡೆಯಲ್ಲಿ ಸಮಯ ಕಳೆಯುತ್ತಾರೆ. ವಿಶೇಷ ದಿನಗಳಲ್ಲಿ ಹಾಗೂ ವರ್ಷಕ್ಕೊಮ್ಮೆ ನಡೆಯುವ ಸುತ್ತೂರು ಜಾತ್ರೆಗೆ ಸುತ್ತಮುತ್ತಲ ಹತ್ತೂರಿನ ಜನರೊಂದಿಗೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಬರುತ್ತಾರೆ. ಇದೆಲ್ಲವನ್ನೂ ಪರಿಗಣಿಸಿ ‘ಪ್ರವಾಸಿ ತಾಣ’ದ ಮಾನ್ಯತೆ ನೀಡಲಾಗಿದೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಅಂತೆಯೇ ನಗರದ ನಂಜನಗೂಡು ರಸ್ತೆಯಲ್ಲಿರುವ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ‘ಶುಕ ವನ’ಕ್ಕೂ ಮಾನ್ಯತೆ ದೊರೆತಿದೆ. ಇಲ್ಲಿ ದೇಶ–ವಿದೇಶಗಳ ಹಲವು ಬಗೆಯ ಗಿಳಿಗಳಿವೆ. ಇಲ್ಲಿಗೂ ಜಿಲ್ಲೆಯೊಂದಿಗೆ ರಾಜ್ಯದಾದ್ಯಂತ ಹೊರ ರಾಜ್ಯಗಳಿಂದ ಹಾಗೂ ವಿದೇಶಗಳಿಂದಲೂ ಸಂದರ್ಶಕರು ಬರುತ್ತಾರೆ. ಹೀಗಾಗಿ ಪರಿಗಣಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.