ಮೈಸೂರು: ‘ಭಗವದ್ಗೀತೆಯನ್ನು ನೀತಿ ಶಿಕ್ಷಣವಾಗಿ ಶಾಲೆಗಳಲ್ಲಿ ಬೋಧಿಸಲು ಸರ್ಕಾರ ಮುಂದಾಗಿದೆ. ಆದರೆ, ಗೀತೆ ಧಾರ್ಮಿಕ ಗ್ರಂಥವೆಂದು ಎ.ಎಲ್.ಬಾಷಂ ಸೇರಿದಂತೆ ಇತಿಹಾಸಕಾರರು ಪ್ರತಿಪಾದಿಸಿದ್ದಾರೆ. ಗೀತೆಯಂತೆ ಎಲ್ಲ ಧರ್ಮಗ್ರಂಥಗಳನ್ನೂ ಮಕ್ಕಳಿಗೆ ಪರಿಚಯಿಸಲಿ’ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ ಸಲಹೆ ನೀಡಿದರು.
‘ಒಂದೇ ಧರ್ಮ ನಮ್ಮನ್ನು ಆಳುವಂತಾದರೆ ಅದು ಶೋಚನೀಯ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಇಂದು ವಿವೇಕರನ್ನು ಆರ್ಎಸ್ಎಸ್, ಬಿಜೆಪಿ ಮರೆತಿದೆ. ಎಲ್ಲ ಧರ್ಮಗಳಲ್ಲೂ ನೀತಿಪಾಠಗಳಿವೆ. ಗೀತೆಯನ್ನು ಮಾತ್ರ ಪರಿಚಯಿಸಿದರೆ ಅದು ಸಲ್ಲ. ಈ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಿ.ಟಿ.ರವಿ ಸೇರಿದಂತೆ ಬಿಜೆಪಿ ಮುಖಂಡರನ್ನು ಮುಕ್ತ ಸಂವಾದಕ್ಕೆ ಆಹ್ವಾನಿಸುತ್ತೇನೆ’ ಎಂದು ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಹಿಂದುತ್ವದ ಕಾರ್ಯಸೂಚಿಯನ್ನು ಜಾರಿಗೆ ತರುವುದಕ್ಕಾಗಿ ಇತಿಹಾಸವನ್ನು ತಿರುಚಲು ಆರ್ಎಸ್ಎಸ್ ಮುಂದಾಗಿದೆ. ಶಿಕ್ಷಣದಲ್ಲಿ ಧಾರ್ಮಿಕತೆ ಹೇರಲಾಗುತ್ತಿದೆ. ಸಮವಸ್ತ್ರ, ಹಿಜಾಬ್ ನೆಪದಲ್ಲಿ ಕೋಮು ಧ್ರುವೀಕರಣ ಮಾಡಲಾಗಿದೆ. ಜಾತ್ರೆಗಳಲ್ಲಿ ಬಡ ಮುಸ್ಲಿಮರನ್ನು ಗುರಿ ಮಾಡಿ ದ್ವೇಷ ಹರಡಲಾಗಿದೆ. ಸರ್ಕಾರಕ್ಕೆ ಕಣ್ಣು– ಕಿವಿ ಇಲ್ಲವಾಗಿದೆ’ ಎಂದು ಟೀಕಿಸಿದರು.
‘ಬಜರಂಗದಳ, ಆರ್ಎಸ್ಎಸ್ ಕಾರ್ಯಕರ್ತರು ಗಲಭೆ ನಡೆಸುವಾಗ ಪೊಲೀಸರನ್ನು ಕೈಕಟ್ಟಿ ನೋಡುವಂತೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಅಪಘಾತವೊಂದನ್ನು ಕೋಮುದ್ವೇಷಕ್ಕೆ ಬಿಜೆಪಿ ಸಚಿವರು ಬಳಸಿಕೊಂಡರು. ಅಪಘಾತ ಎಂದು ಆಯುಕ್ತರು ಸ್ಪಷ್ಟನೆ ನೀಡಿದಾಗಲೂ ಅವರ ಹೇಳಿಕೆನ್ನೇ ಸುಳ್ಳು ಎಂದು ಪ್ರತಿಪಾದಿಸಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.