ಮೈಸೂರು: ‘ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ರೈತರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ’ ಕರ್ನಾಟಕ ಸಮತಾ ಸೈನಿಕ ದಳದ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟಿಸಿದರು.
‘ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್.ನಗರ, ಮೈಸೂರು, ನಂಜನಗೂಡು, ಹುಣಸೂರು ತಾಲ್ಲೂಕಿನಲ್ಲಿ ಭೂ ಖರೀದಿದಾರರು ಹೆಚ್ಚುವರಿಯಾಗಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡುತ್ತಿದ್ದಾರೆ. ಅಲ್ಲಿರುವ ಬಡ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿರುವುದು ಖಂಡನೀಯ. ಹುಣಸೂರಿನ ಸರ್ವೆ ನಂಬರ್ 352, 385ರ ಜಮೀನಿನ ಪರಿಶಿಷ್ಠ ಜಾತಿಯವರ ಜಮೀನು ಖರೀದಿ ರದ್ದುಪಡಿಸಿ ಮೂಲ ಮಂಜೂರುದಾರರಿಗೆ ನೀಡಬೇಕು’ ಎಂದು ಒತ್ತಾಯಿಸಿದರು.
‘ದೊಡ್ಡಮಾರೇಗೌಡನಹಳ್ಳಿ ಸರ್ವೆ ನಂ.186ರ ಜಮೀನನ್ನು 30 ದಲಿತ ಸಾಗುವಳಿದಾರರ ಪತ್ರ ರದ್ದುಪಡಿಸಿ, ಬೇರೆಯವರಿಗೆ ನೀಡಿದ್ದು. ಅದನ್ನು ಮೂಲ ಸಾಗುವಳಿದಾರರಿಗೆ ಹಿಂದಿರುಗಿಸಬೇಕು. ಕೆ.ಆರ್. ನಗರ ತಾಲ್ಲೂಕಿನ ಸರ್ವೆ ನಂ.7ರ ಇತರೆ ಮುಳುಗಡೆಯ ಬಾಬ್ತಿಗೆ ಸಂಬಂಧಿಸಿ ಮುಳುಗಡೆಗೆ ಒಳಪಟ್ಟ ಕಟುಂಬದವರಿಗೆ ಜಮೀನಿನ ಬಾಬ್ತಿಗೆ ಹಳೆಯ ಕೆ.ಆರ್. ನಗರ ಗ್ರಾಮ ಠಾಣೆಯ ಭೂಮಿಯನ್ನು ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.
‘ಜಿಲ್ಲೆಯ ಕೆಲವೆಡೆ ದಲಿತರಿಗೆ ಇನ್ನೂ ಸ್ಮಶಾನ ಇಲ್ಲ. ಹೀಗಾಗಿ ಗ್ರಾಮಕ್ಕೊಂದು ಸ್ಮಶಾನ ಮಂಜೂರು ಮಾಡಬೇಕು. ಅರಣ್ಯದ ಹೆಸರಿನಲ್ಲಿ ಸರ್ವೆ ನಂಬರ್ಗಳ ಭೂಮಿಯನ್ನು ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಿ ಮೂಲ ಖಾತೆದಾರರಿಗೆ ಹಿಂದಿರುಗಿಸಬೇಕು’ ಎಂದರು.
ಮುಖಂಡರಾದ ಗೋವಿಂದರಾಜು, ಜೆ.ದೇವರಾಜು, ಸಿ.ಮರಿಸ್ವಾಮಿ, ಚಲುವರಾಜು, ಈ.ಈರಭದ್ರ, ರಾಜೇಶ್ವರಿ, ಬಸವಯ್ಯ, ಸಣ್ಣಯ್ಯ, ಪುರಿ ಗೋವಿಂದರಾಜು, ಎಂ.ಮಹೇಶ್, ಸುರೇಶ್, ಸಿದ್ದಪ್ಪಾಜಿ, ಪಾಪಣ್ಣ, ರಾಜಶೇಖರ, ಶಿವರಾಜು, ಶ್ರೀನಿವಾಸ್, ಶ್ರೀಕಂಠಮೂರ್ತಿ, ಸುರೇಶ್, ಗೋವಿಂದಯ್ಯ, ಕೆಬ್ಬೆಹುಂಡಿ ನಿಂಗರಾಜು, ಯಾಚೇನಹಳ್ಳಿ ಸಿದ್ದರಾಜು, ನಟರಾಜು, ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.