ಮೈಸೂರು: ಲಕ್ಷ್ಮೀಪುರಂನ ನಂಜುಮಳಿಗೆ ಗಾಡಿಚೌಕದಲ್ಲಿರುವ ಸರ್ಕಾರಿ ವಿಭಜಿತ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ನೆರವಾದ ಅಮೆರಿಕದ ಷಿಕಾಗೊ ವೈದ್ಯ ಬಿ.ಆರ್.ಸಚ್ಚಿದಾನಂದ ಮೂರ್ತಿ ಅವರು ಬುಧವಾರ ತಾವು ಓದಿದ ಶಾಲೆಯನ್ನು ನೋಡುತ್ತಿದ್ದಂತೆ ಭಾವುಕರಾದರು. ಶಿಕ್ಷಕ ವೃಂದವೂ ಅವರನ್ನು ಸನ್ಮಾನಿಸಿ ಸೇವೆಯನ್ನು ಕೊಂಡಾಡಿತು.
1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದ ಶಾಲೆ ಶತಮಾನೋತ್ಸವ ಕಂಡಿದ್ದು, ಅಭಿವೃದ್ಧಿ ಕಾಣದೆ ಶಿಥಿಲಗೊಂಡಿತ್ತು. ಅದರ ಅಭಿವೃದ್ಧಿಗೆ ಸಚ್ಚಿದಾನಂದ ಅವರು 2021 ₹1.5 ಕೋಟಿ ನೀಡಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ನೆರವಾಗಿದ್ದರು. ಇದೀಗ 7 ಕೊಠಡಿಗಳ ನಿರ್ಮಾಣಕ್ಕೆ ಮತ್ತೆ ₹1.84 ಕೋಟಿ ನೀಡುತ್ತಿದ್ದಾರೆ.
ಹೊಸ ಕಟ್ಟಡವನ್ನು ನೋಡಲು ಬಂದ ಅವರನ್ನು ಶಾಲಾ ಮುಖ್ಯಶಿಕ್ಷಕ ಎಸ್.ರವಿಕುಮಾರ್ ಹಾಗೂ ಡಿಡಿಪಿಐ ಎಸ್.ಟಿ.ಜವರೇಗೌಡ ಬರಮಾಡಿಕೊಂಡರು. ಹಳೆಯ ಕಟ್ಟಡ ನೋಡಿದ ಸಚ್ಚಿದಾನಂದ ಅವರು ಭಾವುಕರಾದ್ದಲ್ಲದೆ, ನಾನು ಇದೇ ಜಾಗದಲ್ಲಿ ಕೂರುತ್ತಿದ್ದೆ ಎಂದು ತರಗತಿಗಳನ್ನು ತೋರಿದರು.
ನಂತರ ಮಾತನಾಡಿ, ‘ಶಾಲೆಯು ರಾಜ್ಯಕ್ಕೆ ಮಾದರಿಯಾಗಬೇಕು. ಮಕ್ಕಳಿಗೆ ಆಟದ ಮೈದಾನ, ಡಿಜಿಟಲ್ ಶಿಕ್ಷಣ ಸಿಗಬೇಕು. ಅದಕ್ಕೆ ಎಲ್ಲ ರೀತಿಯ ನೆರವಾಗುವೆ’ ಎಂದರು.
ಮುಖ್ಯ ಶಿಕ್ಷಕ ರವಿಕುಮಾರ್, ‘ಹೊಸ ಕಟ್ಟಡದಲ್ಲಿ 300 ಆಸನಗಳ ಸಭಾಂಗಣ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ ಹಾಗೂ ತರಗತಿ ಕೊಠಡಿಗಳಿವೆ. ಎರಡನೇ ಅಂತಸ್ತಿನಲ್ಲಿ ಭೋಜನಾಲಯವಿದೆ’ ಎಂದು ಅವರಿಗೆ ವಿವರಿಸಿದರು.
ಸಚ್ಚಿದಾನಂದ ಮೂರ್ತಿ ಅವರ ಸಹೋದರ ಓಂ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು, ಬಿಆರ್ಸಿ ಶ್ರೀಕಂಠ ಸ್ವಾಮಿ, ಬಿಆರ್ಪಿ ವಿಜಯ್ಕುಮಾರ್, ಸಿಆರ್ಪಿ ಪ್ರಕಾಶ್, ಶಿಕ್ಷಕರಾದ ಮಹದೇವಮ್ಮ, ಎಂ.ಶೀಲಾ, ಬಿ.ಕೆ.ಶ್ರುತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.