ADVERTISEMENT

ಆರೇ ತಿಂಗಳಲ್ಲಿ ₹ 2 ಲಕ್ಷ ಮೌಲ್ಯದ ಸೈಕಲ್‌ಗಳನ್ನು ಕದ್ದ ಆರೋಪಿ

ಸೈಕಲ್‌ ಕಳ್ಳನ ಬಂಧನ; ವಿಜಯನಗರ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 20:21 IST
Last Updated 4 ಫೆಬ್ರುವರಿ 2019, 20:21 IST

ಮೈಸೂರು: ಸೈಕಲ್ ಕದಿಯುತ್ತಿದ್ದ ಆರೋಪದ ಮೇರೆಗೆ ಹಾಸನ ಜಿಲ್ಲೆಯ ಚಿಕ್ಕಾನಳ್ಳಿ ಗ್ರಾಮದ ವೆಂಕಟೇಶ್ (30) ಎಂಬಾತನನ್ನು ಬಂಧಿಸಿರುವ ವಿಜಯನಗರ ಠಾಣೆ ಪೊಲೀಸರು ಆತನಿಂದ ₹ 2 ಲಕ್ಷ ಮೌಲ್ಯದ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈತ ಸುಮಾರು 6 ತಿಂಗಳುಗಳಿಂದ ವಿಜಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಯ ಮುಂದೆ ಹಾಗೂ ಮನೆಯ ಕಾಂಪೌಂಡ್‍ನ ಒಳಗೆ ನಿಲ್ಲಿಸಿದ್ದ ಸೈಕಲ್‍ಗಳನ್ನು ಕಳ್ಳತನ ಮಾಡುತ್ತಿದ್ದ. ವಿವಿಧ ಕಂಪನಿಗಳ ಒಟ್ಟು 19 ಸೈಕಲ್‌ಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ, ಎಎಸ್‍ಐ ವೆಂಕಟೇಶಗೌಡ ಸಿಬ್ಬಂದಿಯಾದ ಸ್ವಾಮರಾಧ್ಯ, ಈಶ್ವರ್, ಶಂಕರ್, ಸಿ.ಮಹೇಶ್, ಶಿವಮೂರ್ತಿ, ಮಹದೇವ ಕಾರ್ಯಾಚರಣೆ ತಂಡದಲ್ಲಿದ್ದರು.

ADVERTISEMENT

ಸಿದ್ದಾರ್ಥನಗರದಲ್ಲಿ 3 ಅಪಘಾತ; ವ್ಯಕ್ತಿ ಸಾವು

ಸಿದ್ದಾರ್ಥನಗರದಲ್ಲಿ ಒಟ್ಟು ಮೂರು ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೆ, ಮೂವರಿಗೆ ಗಾಯಗಳಾಗಿವೆ. ಎಲ್ಲ ಅ‍ಪಘಾತಗಳೂ ಕಾರು ಮತ್ತು ಬೈಕ್‌ಗಳ ನಡುವೆ ಸಂಭವಿಸಿವೆ.

ಚಾಮುಂಡಿಬೆಟ್ಟದ ತಾವರೆಕೆರೆ ಗೇಟ್ ಬಳಿ ಭಾನುವಾರ ರಾತ್ರಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸುಭಾಷ್‌ನಗರದ ನಿವಾಸಿಜಿಬ್ರಾನ್ ಹುಸೇನ್(18) ಮೃತಪಟ್ಟಿದ್ದಾರೆ.

ಜಿಬ್ರಾನ್ ಅವರು ತಮ್ಮ ಕೆಟಿಎಂ ಬೈಕ್‌ನಲ್ಲಿ ಸ್ನೇಹಿತರೊಂದಿಗೆ ಚಾಮುಂಡಿಬೆಟ್ಟಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಎದುರಿನಿಂದ ಬಂದ ಮಾರುತಿ 800 ಕಾರಿಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರಿಂದ ಜಿಬ್ರಾನ್ ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಿ.ನರಸೀಪುರ ರಸ್ತೆಯಲ್ಲಿ ದೊಡ್ಡ ಆಲದ ಮರದ ಬಳಿ ಚಿಕ್ಕ ಎಂಬುವವರು ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಇದರಿಂದ ಚಿಕ್ಕ ಅವರು ಗಾಯಗೊಂಡಿದ್ದಾರೆ.

ಸಿಂಧು ಎಂಬುವವರು ದ್ವಿಚಕ್ರ ವಾಹನದಲ್ಲಿ ತಮ್ಮ ಸಂಬಂಧಿ ಮಂಗಳಮ್ಮ ಅವರ ಜತೆ ರಿಂಗ್‌ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಬರುವಾಗ ತಿ.ನರಸೀಪುರ ರಸ್ತೆಯಲ್ಲಿ ಆಲನಹಳ್ಳಿ ಕಡೆಯಿಂದ ಬಂದ ಕಾರೊಂದು ಡಿಕ್ಕಿಯಾಗಿದೆ. ಇದರಿಂದ ಮಂಗಳಮ್ಮ ಹಾಗೂ ಸಿಂಧು ಇಬ್ಬರಿಗೂ ಗಾಯಗಳಾಗಿವೆ.

ಈ ಎಲ್ಲ ಪ್ರಕರಣಗಳು ಸಿದ್ದಾರ್ಥನಗರ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.