ADVERTISEMENT

ಮೈಸೂರು: ಚೀನಾ ವಿರುದ್ಧ ಟಿಬೆಟಿಯನ್ನರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 8:46 IST
Last Updated 9 ಮಾರ್ಚ್ 2022, 8:46 IST
   

ಮೈಸೂರು: ಚೀನಾ ದೇಶವು ಅತ್ಯಂತ ವ್ಯವಸ್ಥಿತವಾಗಿ ಟಿಬೆಟ್‌ ಭಾಷೆ, ಸಂಸ್ಕೃತಿ ಹಾಗೂ ಧರ್ಮವನ್ನು ಮಾತ್ರವಲ್ಲ ಒಟ್ಟಾರೆ ಅಸ್ಮಿತೆಯನ್ನೇ ನಾಶಪಡಿಸುತ್ತಿದೆ ಎಂದು ಟಿಬೆಟನ್ ಯೂತ್ ಕಾಂಗ್ರೆಸ್‌ನ ಅಧ್ಯಕ್ಷ ಸಿರಿಂಗ್ ಆಕ್ಸಪ್‌ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಟಿಬೆಟನ್ ಯೂತ್ ಕಾಂಗ್ರೆಸ್, ಪ್ರಾಂತೀಯ ಟಿಬೆಟನ್ ಮಹಿಳಾ ಸಂಘ, ಮೈಸೂರು ಟಿಬೆಟನ್ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಟಿಬೆಟ್ ಭಾಷಾ ಕಲಿಕೆಯನ್ನೇ ಚೀನಾ ನಿಷೇಧಿಸಿದೆ. ಇದು ಇಂದು ಕೇವಲ ಟಿಬೆಟ್ ಸಮಸ್ಯೆ ಎಂಬಂತೆ ಕಾಣುತ್ತಿದೆ. ಆದರೆ, ಭವಿಷ್ಯದಲ್ಲಿ ಇದು ಭಾರತ ಹಾಗೂ ಏಷ್ಯಾ ಖಂಡದ ಸಮಸ್ಯೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಚೀನಾ ದೇಶದ ವಿರುದ್ಧ 63ನೇ ರಾಷ್ಟ್ರೀಯ ಬಂಡಾಯ ದಿನವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಟಿಬೆಟನ್ನರು ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ಇಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದರು.

‘ಟಿಬೆಟ್ ಸಮಸ್ಯೆಗೆ ದಲೈಲಾಮಾ ಅವರು ಸೂಚಿಸಿರುವ ಪರಿಹಾರವನ್ನು ಚೀನಾ ಸರ್ಕಾರ ಒಪ್ಪಿಕೊಳ್ಳಬೇಕು. ಕೇಂದ್ರೀಯ ಟಿಬೆಟಿಯನ್ ಆಡಳಿತದೊಂದಿಗೆ ಮಾತುಕತೆಗೆ ಮುಂದಾಗಬೇಕು, ಪಂಚೆನ್ ಲಾಮಾ ಹಾಗೂ ಇತರೆ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು, ಟಿಬೆಟಿಯನ್ನರ ಧಾರ್ಮಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ಭಾವನೆಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.