ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮ ನೇರಳಕುಪ್ಪೆ ಬಿ ಕಾಲೋನಿಯ ಜಗದೀಶ್ (65) ಎಂಬುವವರು ಕುರಿ ಮೇಯಿಸಲು ಹೋಗಿದ್ದ ವೇಳೆ ನಾಪತ್ತೆಯಾಗಿದ್ದು, ಇವರನ್ನು ಹುಲಿ ಹೊತ್ತೋಯ್ದಿರಬಹುದು ಎಂಬ ಶಂಕೆ ಮೂಡಿದೆ.
ಸಂಜೆ ವೇಳೆಗೆ ಮನೆಗೆ ಆಡು-ಕುರಿಗಳು ಮಾತ್ರ ವಾಪಸ್ ಬಂದಿವೆ. ಇದರಿಂದ ಗಾಬರಿಗೊಂಡ ಮನೆಯವರು ಹುಡುಕಾಟ ನಡೆಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಲರಾಮ, ಗಣೇಶ ಸಾಕಾನೆಗಳೊಂದಿಗೆ ಆರ್.ಎಫ್.ಒ ಹನುಮಂತರಾಜು ಹಾಗೂ ಸಿಬ್ಬಂದಿ ಕೂಂಬಿಂಗ್ ನಡೆಸಿದ ವೇಳೆ ಅರಣ್ಯ ವಸತಿ ಗೃಹ ಹತ್ತಿರದ ಹಂದಿಹಳ್ಳದಲ್ಲಿ ಇವರಿಗೆ ಸೇರಿದ ಪರಿಕರಗಳು ಸಿಕ್ಕಿದ್ದು, ಅಲ್ಲಿ ರಕ್ತದ ಕಲೆ ಪತ್ತೆಯಾಗಿದೆ.
ಸ್ಥಳಕ್ಕೆ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಸಿಎಫ್ ಮಹೇಶ್ಕುಮಾರ್, ಎಸಿಎಫ್ ಪ್ರಸನ್ನಕುಮಾರ್, ಗ್ರಾಮಾಂತರ ಠಾಣೆ ಎಸ್.ಐ.ಶಿವಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಆಡು, ಕುರಿ ಮೇಯಿಸಲು ಹೋದ ನೇರಳಕುಪ್ಪೆ ಹಾಡಿಯ ಜಗದೀಶ್ ವಾಪಾಸ್ ಬಾರದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆನೆಗಳ ಸಹಾಯದಿಂದ ಕೂಂಬಿಂಗ್ ನಡೆಸಿದ್ದು, ಸ್ಥಳದಲ್ಲಿ ಇವರ ಬಟ್ಟೆ, ಕತ್ತಿ, ಚಪ್ಪಲಿ ಸಿಕ್ಕಿದೆ. ರಕ್ತದ ಕಲೆ ಕಾಣಿಸಿಕೊಂಡಿರುವುದರಿಂದ ಹುಲಿಯೇ ಹೊತ್ತೋಯ್ದಿರಬೇಕು ಎಂಬ ಶಂಕೆ ಇದೆ. ರಾತ್ರಿಯಾಗಿದ್ದು ಹಾಗೂ ಮಳೆ ಬರುತ್ತಿರುವುದರಿಂದ ಬೆಳಿಗ್ಗೆ ಕೊಂಬಿಂಗ್ ನಡೆಸಲಾಗುವುದು’ ಎಂದು ಎಸಿಎಫ್ ಪ್ರಸನ್ನಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.