ಹುಣಸೂರು: ಹುಣಸೂರು ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಹಂದನಹಳ್ಳಿ ಗೇಟ್ ಬಳಿ ಸೋಮವಾರ ಸಂಜೆ ಟಿಪ್ಪರ್ ಲಾರಿ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಸವಾರ ನಗರದ ಜಿ.ವಿ. ಟ್ರೇಡರ್ಸ್ ಮಾಲೀಕ ಶ್ರೀನಾಥ್ ಅವರ ಪುತ್ರ ಟೆಕಿ ಗಣೇಶ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೈಸೂರಿನಿಂದ ಹುಣಸೂರಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಗಣೇಶ್ ಬರುತ್ತಿದ್ದಾಗ ಹಂದನಹಳ್ಳಿ ಗೇಟ್ ಬಳಿ ಹಠಾತ್ತಾಗಿ ಟಿಪ್ಪರ್ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಪರಿಣಾಮ ಈ ಅವಘಡವಾಗಿದೆ. ಅಪಘಾತದಲ್ಲಿ ಗಣೇಶ್ ತಲೆಗೆ ತೀವ್ರವಾದ ಹೊಡೆತ ಬಿದ್ದ ಕಾರಣ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಆರ್ಯವೈಶ್ಯ ಸಮಾಜದ ಶ್ರೀನಾಥ್ ಕಿರಾಣಿ ಅಂಗಡಿ ವ್ಯಾಪಾರಿಯಾಗಿದ್ದು, ಇವರಿಗೆ ಇಬ್ಬರು ಪುತ್ರರಿದ್ದರು. 5 ವರ್ಷದ ಹಿಂದೆ ಮೃತ ಗಣೇಶ್ ಸಹೋದರ ವಿಜ್ಞೇಶ್ನನ್ನು ದುಷ್ಕರ್ಮಿಗಳು ಮೈಸೂರಿನ ಕಾಲೇಜಿನಿಂದ ಅಪಹರಿಸಿ ಕೊಲೆಗೈದಿದ್ದರು. ಶ್ರೀನಾಥ್ ಅವರ ಎರಡನೇ ಪುತ್ರ ಗಣೇಶ್ ಸೋಮವಾರ ವಿಪ್ರೊ ಕಂಪನಿಯಿಂದ ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ.
ಟಿಪ್ಪರ್ ಲಾರಿ ಮಂಡ್ಯ ಮೂಲದವರಿಗೆ ಸೇರಿದ್ದು, ಹಂದನಹಳ್ಳಿ ಗ್ರಾಮದಿಂದ ಮೈಸೂರಿಗೆ ತೆರಳುತ್ತಿತ್ತು ಎಂದು ಬಿಳಿಕೆರೆ ಪೊಲೀಸರು ತಿಳಿಸಿದ್ದಾರೆ. ಲಾರಿ ವಶಕ್ಕೆ ಪಡೆದು, ಚಾಲಕನ ಪತ್ತೆ ಕಾರ್ಯ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.