
ತಿ.ನರಸೀಪುರ: ‘ದೇಶದ ಬೆನ್ನೆಲುಬಾದ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ ಯಾತ್ರೆ ನಡೆಯುತ್ತಿದೆ’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಹೇಳಿದರು.
ತಾಲ್ಲೂಕಿನ ಬನ್ನೂರು ಸಂತೆಮಾಳದ ಬಸವೇಶ್ವರ ವೃತ್ತದಲ್ಲಿ ಭಾನುವಾರ ರೈತರಿಗೆ ಈ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಫೆ.11ರಂದು ಮೈಸೂರಿನಲ್ಲಿ ನಡೆಯಲಿರುವ ರೈತ ಸಮಾವೇಶಕ್ಕೆ ಭಾಗವಹಿಸುವಂತೆ ರೈತರಲ್ಲಿ ಅವರು ಮನವಿ ಮಾಡಿದರು.
ದೇಶದ ರೈತರಿಂದ ಸಂಗ್ರಹಿಸಿರುವ ಸಹಿ ಸಂಗ್ರಹದ ಮನವಿ ಪತ್ರವನ್ನು ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗುವುದು.
ಈ ರೈತ ಜಾಗೃತಿ ಯಾತ್ರೆ ಮೈಸೂರಿಗೆ ಬರುತ್ತಿದ್ದು, 11ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಊಟಿ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಮಾವೇಶ ನಡೆಯಲಿದೆ. ಆದ್ದರಿಂದ ತಾಲ್ಲೂಕಿನ ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ರೈತರು ಹಾಗೂ ರೈತ ಮಹಿಳೆಯರು ಅಂದು ಭಾಗವಹಿಸಿ ಸಹಿ ಸಂಗ್ರಹ ಪತ್ರಗಳನ್ನು ನೀಡಬೇಕೆಂದು ಕೋರಿದರು.
‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು,ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಂಪೂರ್ಣ ಸಾಲ ಮನ್ನಾ,ಹಾಗೂ ಡಾ ಎಂ ಎಸ್ ಸ್ವಾಮಿ ನಾಥನ್ ವರದಿ ಜಾರಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಹಿ ಸಂಗ್ರಹ ಪತ್ರ ಸ್ವೀಕರಿಸಿ ರೈತ ಜಾಗೃತಿ ಯಾತ್ರೆ ನಡೆಯುತ್ತಿದೆ’ ಎಂದು ತಿಳಿಸಿದರು.
ದೇಶದ ರೈತರಿಗೆ ಎಂಎಸ್ಪಿ ಖಾತರಿ ಕಾನೂನು ಇಲ್ಲದ ಕಾರಣ ರೈತರು ವರ್ಷಕ್ಕೆ ₹15 ಲಕ್ಷ ಕೋಟಿ ನಷ್ಟ ಅನುಭವಿಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಫೆ.7ರಿಂದ ರೈತ ಜಾಗೃತಿ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಿ ಕೇರಳ ಪಾಂಡಿಚೆರಿ, ತಮಿಳುನಾಡು, ಮುಖಾಂತರ ಹಾದು ಹೋಗಿ ಅಲ್ಲಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಯಾತ್ರೆ ಸಾಗಲಿದ್ದು, ಈ ಮಾರ್ಗದಲ್ಲಿ ಸಿಗುವ ಹಳ್ಳಿಗಳ ರೈತರಿಂದ ಸಹಿ ಸಂಗ್ರಹ ಪಡೆದು ಮಾರ್ಚ್ 19ರಂದು ಪ್ರಧಾನಿಯವರಿಗೆ ಸಲ್ಲಿಸಲಾಗುವುದು. ಸುಮಾರು 40 ದಿನಗಳ ಈ ಯಾತ್ರೆ ಕಾಶ್ಮೀರ ತಲುಪಿ ನಂತರ ದೆಹಲಿಯಲ್ಲಿ ಮಾರ್ಚ್ 19ರಂದು ರಾಮ್ ಲೀಲಾ ಮೈದಾನದಲ್ಲಿ ದೇಶದ ರೈತರಿಂದ ಬೃಹತ್ ಸಮಾವೇಶ ನಡೆಸಲಾಗುತ್ತದೆ ಎಂದು ತಿಳಿಸಿದರು.
ಬನ್ನೂರು ಸೂರಿ, ಅತ್ತಹಳ್ಳಿ, ಎ.ಎನ್.ಮಹೇಶ್, ಪಿ.ನವೀನ್, ಕುಂತನಹಳ್ಳಿ ಕುಳ್ಳೆಗೌಡ, ಸ್ವಾಮಿ, ಮಹೇಶ್, ಮಹಿಳಾ ಸಂಘದ ಗೌರಮ್ಮ, ನಂಜಮಣಿ, ಮಹಾದೇವಮ್ಮ, ಪೂಜಾ, ಅರ್ಪಿತ, ಮಂಗಳಗೌರಿ, ಚಾಮನಹಳ್ಳಿ ನಿಂಗೇಗೌಡ, ಕರಿಯಪ್ಪ, ಬನ್ನೂರು ರವಿ, ಶಂಕರ್, ಬೆಟ್ಟಯ್ಯ, ಚಂದ್ರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.