
ಹುಣಸೂರು: ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ತಕ್ಕಂತೆ ದರ ಸಿಗದೆ ರೈತ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಡಿ. 25ರ ನಂತರದಲ್ಲಿ ಹರಾಜು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟಿಸಲಿದ್ದೇವೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.
ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ದೇವರಾಜ ಅರಸು ತಂಬಾಕು ಹರಾಜು ಮಂಡಳಿ ರೈತ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿ, ಪಿರಿಯಾಪಟ್ಟಣ ತಾಲ್ಲೂಕಿನ ಕೆಗ್ಗುಂಡಿಯಲ್ಲಿ ಒಂದು ತಿಂಗಳ ಹಿಂದೆ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳೆಗಾರರಿಗೆ ಉತ್ತಮ ದರ ಸಿಗುವ ರೀತಿ ಉನ್ನತ ಮಟ್ಟದಲ್ಲಿ ಚರ್ಚಿಸುವ ಭರವಸೆ ನೀಡಿದ್ದರು. ಈವರಗೆ 21 ಮಿಲಿಯನ್ ಕೆ.ಜಿ ತಂಬಾಕು ಮಾರಾಟವಾಗಿದ್ದು ದರದಲ್ಲಿ ಏರಿಕೆ ಇಲ್ಲದೆ ₹ 20 ಕುಸಿತ ಕಂಡು ಬೆಳೆಗಾರರಿಗೆ ಆತಂಕ ಸೃಷ್ಟಿಯಾಗಿದೆ ಎಂದರು.
ಗುಣಮಟ್ಟದ ತಂಬಾಕಿಗೆ ಆಂಧ್ರಪ್ರದೇಶದಲ್ಲಿ ನೀಡಿದ ದರದಂತೆ ನೀಡಬೇಕೆಂದು ಮಾರುಕಟ್ಟೆ ಆರಂಭದ ಮುನ್ನವೇ ರೈತ, ಖರೀದಿ ಕಂಪನಿ ಮತ್ತು ಮಂಡಳಿ ಅಧಿಕಾರಿಗಳ ಸಭೆಯಲ್ಲಿ ಮನವಿ ಮಾಡಿದ್ದು, ಅದಕ್ಕೆ ಕಂಪನಿಗಳು ಸಮ್ಮತಿಸಿದ್ದರು. ರಾಜ್ಯದಲ್ಲಿ ತಂಬಾಕು ಹರಾಜು ಆರಂಭದ ದಿನ ನೀಡಿದ ದರ ₹ 320 ಏರಿಕೆ ಇಲ್ಲದೆ ಸಾಗಿದ್ದು, ಸರಾಸರಿ ದರ ಕುಸಿತವಾಗಿದೆ ಎಂದರು.
ನಿಯೋಗ: ಕೆಗ್ಗುಂಡಿ ತಂಬಾಕು ಹರಾಜು ಮಂಡಳಿಯಲ್ಲಿ ನಡೆದಿದ್ದ ಸಭೆಯಲ್ಲಿ ಸಂಸದರು ರಾಜ್ಯದ ತಂಬಾಕು ಬೆಳೆಗಾರರ ನಿಯೋಗವನ್ನು ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದರು. ಈ ವರೆಗೂ ಯಾವುದೇ ಚಕಾರವಿಲ್ಲದೆ ನಿತ್ಯ ರೈತ ಮಾರುಕಟ್ಟೆಯಲ್ಲಿ ನಷ್ಟದಲ್ಲಿ ತಂಬಾಕು ಮಾರಾಟ ಮಾಡಬೇಕಾಗಿದೆ. ಡಿ.25 ರೊಳಗೆ ದರ ಹೆಚ್ಚಾಗುವ ಭರವಸೆ ನೀಡಿದ್ದ ಸಂಸದರು ಮುಂದಿನ ಒಂದು ವಾರದೊಳಗೆ ದರ ಸಮರಕ್ಕೆ ಸಂಬಂಧಿಸಿದಂತೆ ಕೇಂದ್ರ ವಾಣಿಜ್ಯ ಸಚಿವರ ಗಮನ ಸೆಳೆದು ಸಮಸ್ಯೆ ಬಗೆಹರಿಸಬೇಕು ಎಂದು ಕಾಫ್ ಸಮಿತಿ ಸದಸ್ಯ ನಿಲುವಾಗಿಲು ಪ್ರಭಾಕರ್ ಒತ್ತಾಯಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಮೈಸೂರು ಪ್ರಾದೇಶಿಕ ತಂಬಾಕು ಮಂಡಳಿ ಅಧಿಕಾರಿ ಗೋಪಾಲ್ ಕೆ. ಮಾತನಾಡಿ, ರಾಜ್ಯದ ತಂಬಾಕಿಗೆ ಉತ್ತಮ ದರ ಕೊಡಿಸುವ ಬಗ್ಗೆ ಈಗಾಗಲೇ ಮಂಡಳಿ ಅಧಿಕಾರಿಗಳು ಉನ್ನತ ಮಟ್ಟದಲ್ಲಿ ಚರ್ಚಿಸಿದ್ದು, ಡಿಸೆಂಬರ್ ಅಂತ್ಯದಲ್ಲಿ ವಿದೇಶದಿಂದ ತಂಬಾಕು ಬೇಡಿಕೆ ಕುರಿತ ವಿವಿಧ ಕಂಪನಿಗಳಿಗೆ ಮಾಹಿತಿ ಸಿಗುವ ಸಾಧ್ಯತೆ ಇದೆ. ನಂತರದಲ್ಲಿ ಮಾರುಕಟ್ಟೆ ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಬೆಳೆಗಾರರ ಬೇಡಿಕೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿ ಮನವಿ ಸ್ವೀಕರಿಸಿದರು.
ಸಭೆಯಲ್ಲಿ ಮೋದೂರು ಶಿವಣ್ಣ, ಉಂಡವಾಡಿ ಚಂದ್ರೇಗೌಡ, ಅಶೋಕ್, ಶ್ರೀಧರ್, ಬೆಂಕಿಪುರ ಚಿಕ್ಕಣ್ಣ, ಮಹದೇವು, ಅಗ್ರಹಾರ ರಾಮೇಗೌಡ, ಸತೀಶ್, ಪ್ರಕಾಶ್ ರಾಜೇ ಅರಸು, ಚೆಲುವಯ್ಯ, ನಾಗರಾಜಪ್ಪ, ನಿಂಗೇಗೌಡ, ಮಹೇಂದ್ರ ಸೇರಿದಂತೆ ತಂಬಾಕು ಬೆಳೆಗಾರರಿದ್ದರು.
ಪ್ರತಿಭಟನೆ: ಎಚ್ಚರಿಕೆ ತಂಬಾಕು ಹರಾಜು ಪ್ರಕ್ರಿಯೆ ಆರಂಭವಾಗಿ ತಿಂಗಳು ಕಳೆದಿದ್ದರೂ ದರ ಏರಿಕೆ ಇಲ್ಲದೆ ರೈತರು ನಷ್ಟದಲ್ಲಿದ್ದು ಮಾರುಕಟ್ಟೆಯಲ್ಲಿ ದರ ಸುಧಾರಣೆ ಕಾಣದಿದ್ದರೆ ಡಿ. 25 ನಂತರದಲ್ಲಿ ಮೈಸೂರು ಹಾಸನ ಚಾ.ನಗರಮಂಡ್ಯ ಸಂಸದರ ಕಚೇರಿ ಎದುರು ತಂಬಾಕು ಬೆಳೆಗಾರರು ಧರಣಿ ನಡೆಸಿ ಪ್ರತಿಭಟಿಸಿ ಮಾರುಕಟ್ಟೆ ಬಂದ್ ಮಾಡಲಿದ್ದೇವೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.