
ಮೈಸೂರು: ‘ಬುಡಕಟ್ಟು ಜನರು ಆರ್ಥಿಕವಾಗಿ ಸಬಲರಾಗುವಂತೆ ಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತರಬೇತಿ ನೀಡಿ, ಉದ್ಯೋಗ ಕೊಡಿಸುವ ಕಾರ್ಯಕ್ರಮ ರೂಪಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಎಚ್.ಎಸ್. ಗಿರಿಜಾಂಬ ತಿಳಿಸಿದರು.
ಹೊರವಲಯದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘15 ದಿನಗಳಲ್ಲಿ ಬುಡಕಟ್ಟು ಮುಖಂಡರ ಸಭೆ ಕರೆದು ಸಲಹೆ– ಸೂಚನೆ ಪಡೆಯಲಾಗುವುದು’ ಎಂದರು.
‘ಆರ್ಥಿಕ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಬುಡಕಟ್ಟು ಮಹಿಳೆಯರ ಪಾತ್ರ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಂಡನೆಯಾದ ಪ್ರಬಂಧಗಳ ಪುಸ್ತಕ ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು.
ಸಂಸ್ಥೆಯ ಸಂಶೋಧನಾಧಿಕಾರಿ ಸಿ. ಶಿವಕುಮಾರ್, ‘ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯರು ಅರಣ್ಯಾಧಾರಿತ ಜೀವನೋಪಾಯ, ಕೃಷಿ ಕೈಗಾರಿಕೆ, ಅರಣ್ಯ ಉತ್ಪನ್ನ ಸಂಗ್ರಹಣೆ ಮತ್ತು ಮೌಲ್ಯ ವರ್ಧನೆ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆದರೆ, ಅವರ ಶ್ರಮಕ್ಕೆ ತಕ್ಕ ಮಾನ್ಯತೆ ಮತ್ತು ಮೌಲ್ಯ ಸಂಪೂರ್ಣವಾಗಿ ದೊರಕಿಲ್ಲ ಎಂಬುದು ಚರ್ಚೆಗಳಿಂದ ಹೊರಬಿದ್ದಿದೆ’ ಎಂದರು.
ಪ್ರಬಂಧ ಮಂಡಿಸಿದ 20 ಮಂದಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಬೆಂಗಳೂರು ವಿವಿಯ ಪ್ರೊ.ಸಮತಾ ದೇಶಮಾನೆ, ಹಂಪಿ ವಿವಿ ಯರ್ರಿಸ್ವಾಮಿ ಇ., ಮಂಗಳೂರು ವಿವಿಯ ಸಬೀತಾ, ಲೆಕ್ಕಾಧಿಕಾರಿ ಬಿ.ಆರ್. ಭವ್ಯಾ, ಅಧೀಕ್ಷಕಿ ಎಂ.ವಿ. ನಾಗರತ್ನಾ, ಸಂಶೋಧಕರಾದ ಕಲಾವತಿ, ಮೋಹನ್ ಕುಮಾರ್, ಕೆ.ಡಿ. ದಿನೇಶ್, ರವಿಕುಮಾರ್, ಎಂ.ಸಿ. ವೇಣುಕಾಂತ್, ಬಿ.ಆರ್. ಪ್ರಸನ್ನಕುಮಾರ್, ಮಂಜುನಾಥ್, ಕೆ. ರಮೇಶ್, ಭರತ್ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.