
ಮೈಸೂರು: ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯು ‘ಜೀವ ವಿಮೆ’ ಮಾಡಿಸಿಕೊಡುವ ಮೂಲಕ ಸಹಾಯಹಸ್ತ ಚಾಚಿದೆ. ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ನೆರವಿನ ರಕ್ಷಣೆ ದೊರೆಯುವಂತಾಗಲು ಮಿಡಿದಿದೆ.
ನಗರವೂ ಸೇರಿದಂತೆ ಜಿಲ್ಲೆಯ 500 ಮಂದಿಗೆ ಈವರೆಗೆ ಮೂರು ಹಂತದಲ್ಲಿ ವಿಮೆಯನ್ನು ಉಚಿತವಾಗಿ ಮಾಡಿಸಿಕೊಡಲಾಗಿದೆ.
ಸಮೂಹವಿಮೆ ಇದಾಗಿದ್ದು, ಒಬ್ಬರಿಗೆ ₹ 300 ಪ್ರೀಮಿಯಂ ಪಾವತಿಸಲಾಗಿದೆ. ವೈದ್ಯಕೀಯ ಚಿಕಿತ್ಸೆಗೆ ₹ 1 ಲಕ್ಷ ಹಾಗೂ ಅಕಸ್ಮಾತ್ ಮೃತಪಟ್ಟರೆ ಅವರ ಅವಲಂಬಿತರಿಗೆ ಅಥವಾ ಕುಟುಂಬದವರಿಗೆ ₹ 2 ಲಕ್ಷ ವಿಮಾಮೊತ್ತ ದೊರೆಯುತ್ತದೆ. ಪಕ್ಷವು ‘ದಿ ನ್ಯೂ ಇಂಡಿಯಾ ಅಸ್ಯೂರೆನ್ಸ್ ಕಂಪನಿ ಲಿಮಿಟೆಡ್’ ಮೂಲಕ ವಿಮೆಯ ರಕ್ಷೆಯನ್ನು ಒದಗಿಸಿಕೊಡಲಾಗುತ್ತಿದೆ.
‘ಹಲವು ಶೋಷಣೆ, ಸಂಕಷ್ಟಗಳಿಗೆ ಒಳಗಾಗುವ ಲಿಂಗತ್ವ ಅಲ್ಪಸಂಖ್ಯಾತರು ಅನಾರೋಗ್ಯ, ಅಪಘಾತಕ್ಕೆ ಒಳಗಾದ ವೇಳೆ ಚಿಕಿತ್ಸಾ ವೆಚ್ಚ ಭರಿಸಲು ಪರದಾಡುತ್ತಾರೆ. ಹೀಗಾಗಿ, ಅವರಿಗೆ ಕೈಹಿಡಿಯುವ ಉದ್ದೇಶದಿಂದ ಪಕ್ಷದ ಪದಾಧಿಕಾರಿಗಳೆಲ್ಲರೂ ಸೇರಿ ವಿಮೆ ಮಾಡಿಸಿಕೊಟ್ಟಿದ್ದೇವೆ. ನಿರ್ಲಕ್ಷ್ಯಕ್ಕೆ ಒಳಗಾದ ಈ ವರ್ಗದತ್ತ ಮಾನವೀಯ ನೆಲೆಯಲ್ಲಿ ಸಹಾಯಹಸ್ತ ಚಾಚಿದ್ದೇವೆ’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾಧ್ಯವಾದವರು ಮುಂದಿನ ವರ್ಷದ ಪ್ರೀಮಿಯಂ ಕಟ್ಟಿ ನವೀಕರಿಸಿಕೊಳ್ಳಬಹುದು. ಉಳಿದವರಿಗೆ ನಾವೇ ಪಾವತಿಸುತ್ತೇವೆ. ಸದ್ಯ 500 ಮಂದಿಯನ್ನು ವಿಮೆಯ ರಕ್ಷಣೆಗೆ ಒಳಪಡಿಸಿ ಬಾಂಡ್ಗಳನ್ನು ಹಸ್ತಾಂತರಿಸಿದ್ದೇವೆ. ಮತ್ತಷ್ಟು ಮಂದಿ ಮುಂದೆ ಬಂದರೆ, ವಿಮೆ ಮಾಡಿಸಿಕೊಡಲಾಗುವುದು. ಇದಕ್ಕಾಗಿ ಉಳ್ಳವರ ನೆರವು ಪಡೆಯಲಾಗುವುದು’ ಎನ್ನುತ್ತಾರೆ ಅವರು.
‘ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಶೇ 90ಕ್ಕೂ ಜಾಸ್ತಿ ಮಂದಿ ಮನೆ ಬಿಟ್ಟು ಬಂದಿರುತ್ತಾರೆ. ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಭಿಕ್ಷಾಟನೆಯಲ್ಲಿ ತೊಡಗುವುದೂ ಇದೆ. ಸಾಮಾಜಿಕವಾಗಿ ತಿರಸ್ಕೃತಗೊಂಡಿರುತ್ತಾರೆ. ಅವರನ್ನು ಕೀಳಾಗಿ ಕಾಣುವುದೂ ಉಂಟು. ಅವರ ಮೇಲೆ ದಾಳಿಯೂ ನಡೆಯುತ್ತವೆ. ಹೀಗಾಗಿ, ಅವರಿಗೆ ಸಹಾಯ ಆಗಲೆಂದು ವಿಮಾ ಯೋಜನೆ ರೂಪಿಸಿದೆವು’ ಎಂದು ತಿಳಿಸಿದರು.
‘ಎನ್ಜಿಒಗಳು, ಸಂಘ–ಸಂಸ್ಥೆಗಳು, ಉದ್ಯಮಿಗಳು ಇಂಥ ಕೆಲಸಕ್ಕೆ ಮುಂದಾಗಬೇಕು. ಸರ್ಕಾರದ ಗಮನವನ್ನು ಸೆಳೆಯುವುದೂ ನಮ್ಮ ಆಶಯವಾಗಿದೆ. ಬೇರೆ ಜಿಲ್ಲೆಗಳಲ್ಲೂ ಇಂತಹ ಕೆಲಸ ನಡೆದರೆ ಅಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಅವರು.
‘ನಮಗೆ ವಿಮಾ ರಕ್ಷಣೆ ಸಿಕ್ಕಿರುವುದರಿಂದ ಅನುಕೂಲವಾಗಿದೆ. ಕಾಂಗ್ರೆಸ್ ಪಕ್ಷ ನಮ್ಮ ನೆರವಿಗೆ ಬಂದಿರುವುದು ಖುಷಿ ತಂದಿದೆ’ ಎಂದು ‘7 ರೇನ್ಬೋಸ್’ ಸಂಘಟನೆಯ ಸಂಚಾಲಕಿ ಪ್ರಣತಿ ಪ್ರಕಾಶ್ ಪ್ರತಿಕ್ರಿಯಿಸಿದರು.
ಜಾಗೃತಿ ಮೂಡಿಸುವುದು ಇಂಥವರಿಗೆ ನೆರವಾಗಬೇಕೆಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುವುದು ನಮ್ಮ ಉದ್ದೇಶವಾಗಿದೆಬಿ.ಜೆ. ವಿಜಯ್ಕುಮಾರ್ ಅಧ್ಯಕ್ಷ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ ಮೈಸೂರು
ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ಜೀವವಿಮೆ ಬಾಂಡ್ ವಿತರಿಸುವ ಕಾರ್ಯವನ್ನು ರಾಜ್ಯದಾದ್ಯಂತ ವಿಸ್ತರಿಸಲು ಕ್ರಮ ವಹಿಸಲಾಗುವುದುವಿನಯ್ಕುಮಾರ್ ಸೊರಕೆ ಅಧ್ಯಕ್ಷ ಕೆಪಿಸಿಸಿ ಪ್ರಚಾರ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.