ADVERTISEMENT

ಸಾರಿಗೆ ಅವ್ಯವಸ್ಥೆ: ಶಾಸಕ ಕಿಡಿ

ಗ್ರಾಮೀಣ ಭಾಗಕ್ಕೆ ಬಸ್‌ ಸೌಲಭ್ಯವಿಲ್ಲದೆ ನಿತ್ಯ ಪ್ರತಿಭಟನೆ: ಸಭೆಯಲ್ಲಿ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 4:56 IST
Last Updated 19 ಫೆಬ್ರುವರಿ 2021, 4:56 IST
ಹುಣಸೂರಿನಲ್ಲಿ ಗುರುವಾರ ಶಾಸಕ ಮಂಜುನಾಥ್ ಅವರು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು
ಹುಣಸೂರಿನಲ್ಲಿ ಗುರುವಾರ ಶಾಸಕ ಮಂಜುನಾಥ್ ಅವರು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು   

ಹುಣಸೂರು: ತಾಲ್ಲೂಕಿನಾದ್ಯಂತ ರಸ್ತೆ ಸಾರಿಗೆ ಅವ್ಯವಸ್ಥೆಗೆ ಬೇಸತ್ತ ವಿದ್ಯಾರ್ಥಿ ಮತ್ತು ಪೋಷಕರು ಶಾಸಕರ ವಿರುದ್ಧ ಹರಿಹಾಯುವ ಪರಿಸ್ಥಿತಿ ಎದುರಾಗಿದೆ ಎಂದು ಮೈಸೂರು ಗ್ರಾಮಾಂತರ ಸಾರಿಗೆ ಜಿಲ್ಲಾಧಿಕಾರಿ ಶ್ರೀನಿವಾಸ್‌ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಕ್ಷೇತ್ರದಲ್ಲಿ ಈ ಹಿಂದೆ ಬಸ್ ಸಮಸ್ಯೆ ಇರಲಿಲ್ಲ. ಈಗ ಏಕಾಏಕಿ ಬಸ್ ಸಂಚಾರ ಸಮಸ್ಯೆ ಎದುರಾಗಿದೆ. ಕಳೆದ ಒಂದು ವಾರದಿಂದ ತಾಲ್ಲೂಕಿನಾದ್ಯಂತ ನಿತ್ಯ ಪ್ರತಿಭಟನೆ ನಡೆದಿದೆ. ಹುಣಸೂರು ಡಿಪೊ ವ್ಯವಸ್ಥಾಪಕರು ಸಾಮಾಜಿಕ ಕಾಳಜಿಗೆ ಒತ್ತು ನೀಡಿ ಕೆಲಸ ನಿರ್ವಹಿಸದೆ ಕೇವಲ ಲಾಭ ಇರುವ ಸ್ಥಳಕ್ಕೆ ಬಸ್ ಓಡಿಸುವ ಪ್ರವೃತ್ತಿಯಿಂದ ನಾಗರಿಕರು ಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.

ಹುಣಸೂರು ಡಿಪೊ ವ್ಯವಸ್ಥಾಪಕ ವಿಪಿನ್ ಮಾತನಾಡಿ, ‘ಕೋವಿಡ್ ನಂತರದಲ್ಲಿ 5 ಬಸ್ ಗುಜರಿಗೆ ಹಾಕಿದ್ದು, ಹಾಲಿ ಇರುವ 97 ಬಸ್‌ನಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಭಾಗಕ್ಕೆ ತೆರಳುವ ಮಾರ್ಗಗಳಿಗೂ ನಿಯೋಜಿಸಲಾಗಿದೆ. ಕೆಲವು ಗ್ರಾಮೀಣ ಭಾಗದಲ್ಲಿ ಖಾಸಗಿ ವಾಹನದಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಿದ್ದು ಇಲಾಖೆಗೆ ನಷ್ಟವಾಗಿದೆ’ ಎಂದರು.

ADVERTISEMENT

ಉಪವಿಭಾಗಾಧಿಕಾರಿ ವೀಣಾ ಮಾತನಾಡಿ, ‘ಕೋವಿಡ್ ಬರುವ ಮುನ್ನ ಡಿಪೊ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಬಸ್ ಓಡಿಸುತ್ತಿತ್ತು, ಅದೇ ರೀತಿ ಕಾಯಂ ಆಗಿ ಬಸ್ ನಿಯೋಜಿಸಿ ಸಾರ್ವಜನಿಕರ ಅನುಕೂಲ ಕಾದುಕೊಳ್ಳಲು’ ಸೂಚಿಸಿದರು.

ಸೌಲಭ್ಯ: ನಗರ ಬಸ್ ನಿಲ್ದಾಣದಲ್ಲಿ ಹೈಮಾಸ್ಟ್‌ ದೀಪ, ಸಿಸಿಟಿವಿ ಕ್ಯಾಮೆರಾ ದುರಸ್ತಿಗೊಳಿಸಬೇಕಿದ್ದು, ಹೆಚ್ಚುವರಿ ಹೈಟೆಕ್ ಶೌಚಾಲಯ ನಿರ್ಮಿಸಬೇಕು ಎಂದು ಸಾರಿಗೆ ಜಿಲ್ಲಾಧಿಕಾರಿ ಶ್ರೀನಿವಾಸ್ ಗಮನ ಸೆಳೆದರು. ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮೂಲ ಸೌಲಭ್ಯವಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ ಎಂದರು.

ಸಭೆಯಲ್ಲಿ ತಹಶೀಲ್ದಾರ್ ಬಸವರಾಜ್, ತಾ.ಪಂ. ಇಒ ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.