ಮೈಸೂರು: ನಗರದ ಕುಕ್ಕರಹಳ್ಳಿ ಪ್ರವೇಶ ದ್ವಾರಕ್ಕೆ ಹೊಂದಿಕೊಂಡಂತೆ ಇರುವ ಹತ್ತಾರು ಮರಗಳ ಹನನಕ್ಕೆ ಗುರುತು ಮಾಡಲಾಗಿದೆ.
ಪ್ರವೇಶ ದ್ವಾರಕ್ಕೆ ಸಮೀಪವೇ ರೈಲ್ವೆ ಲೆವಲ್ ಕ್ರಾಸಿಂಗ್ ಇದ್ದು, ಇಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧವಾಗಿದೆ. ಸೇತುವೆ ನಿರ್ಮಾಣಕ್ಕೆ ಅಗತ್ಯವಾದ ಕಾಮಗಾರಿ ಹಾಗೂ ರಸ್ತೆ ವಿಸ್ತರಣೆಗೆ ಜಾಗ ಗುರುತಿಸಿದ್ದು, ಇಲ್ಲಿ ಇರುವ ಮರಗಳನ್ನು ಕತ್ತರಿಸಲು ಸಂಬಂಧಿಸಿದ ಇಲಾಖೆ ಮುಂದಾಗಿದೆ. ಅದರ ಮೊದಲ ಭಾಗವಾಗಿ ಮರಗಳನ್ನು ಗುರುತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ವಚ್ಛ ಗಾಳಿ–ಹಸಿರಿಗೆ ಹೆಸರಾದ ಮೈಸೂರಿನಲ್ಲಿ ಈಚೆಗೆ ಮರಗಳ ಹನನ ಹೆಚ್ಚು ಸುದ್ದಿ ಮಾಡುತ್ತಿದೆ. ಇದರ ಬೆನ್ನಲ್ಲೇ ಕುಕ್ಕರಹಳ್ಳಿ ಕೆರೆ ಸಮೀಪ ಮರಗಳಿಗೆ ಕೊಡಲಿ ಪೆಟ್ಟು ಹಾಕಲು ಮುಂದಾಗಿರುವುದು ಪರಿಸರಪ್ರಿಯರ ಆತಂಕಕ್ಕೆ ಕಾರಣವಾಗಿದೆ.
‘ಸೇತುವೆ– ರಸ್ತೆ ವಿಸ್ತರಣೆ ಸೇರಿದಂತೆ ಹಲವು ಕಾಮಗಾರಿಗಳಿಗಾಗಿ ಈಚೆಗೆ ಮರಗಳನ್ನು ನಿರಂತರವಾಗಿ ಕಡಿಯುತ್ತಿರುವುದು ಆತಂಕದ ಸಂಗತಿ. ಯಾವುದೇ ಅಭಿವೃದ್ಧಿ ಕಾಮಗಾರಿಗೆ ಮುನ್ನ ಪರಿಸರ ಸಂರಕ್ಷಣೆಗೂ ಆದ್ಯತೆ ಸಿಗಬೇಕು. ಕುಕ್ಕರಹಳ್ಳಿ ಪರಿಸರವು ಹಸಿರಿಗೆ ಹೆಸರಾಗಿದ್ದು, ಇಲ್ಲಿನ ಮರಗಳು ಉಳಿಯಬೇಕು’ ಎಂದು ಇಲ್ಲಿನ ವಾಯುವಿಹಾರಿಗಳು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.