ADVERTISEMENT

ಸಂಸದ ವಿ.ಶ್ರೀನಿವಾಸಪ್ರಸಾದ್‌ ಸಾಧನೆ ಶೂನ್ಯ: ಆರ್‌.ಧ್ರುವನಾರಾಯಣ

ಅಭಿಯಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಆರೋಪ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:27 IST
Last Updated 18 ಮಾರ್ಚ್ 2022, 4:27 IST
ನಂಜನಗೂಡು ತಾಲ್ಲೂಕಿನ ಸಿಂಧೂವಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್.ಧ್ರುವನಾರಾಯಣ ಮಾತನಾಡಿದರು. ಕಳಲೆ ಕೇಶವಮೂರ್ತಿ, ಕುರಹಟ್ಟಿ ಮಹೇಶ್, ಸೋಮೇಶ್, ರವಿಕುಮಾರ್, ಮಾರುತಿ, ನಾಗೇಶ್ ರಾಜ್ ಇದ್ದರು
ನಂಜನಗೂಡು ತಾಲ್ಲೂಕಿನ ಸಿಂಧೂವಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್.ಧ್ರುವನಾರಾಯಣ ಮಾತನಾಡಿದರು. ಕಳಲೆ ಕೇಶವಮೂರ್ತಿ, ಕುರಹಟ್ಟಿ ಮಹೇಶ್, ಸೋಮೇಶ್, ರವಿಕುಮಾರ್, ಮಾರುತಿ, ನಾಗೇಶ್ ರಾಜ್ ಇದ್ದರು   

ನಂಜನಗೂಡು: ‘ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಮೂರು ವರ್ಷಗಳ ಸಾಧನೆ ಶೂನ್ಯ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ದೂರಿದರು.

ತಾಲ್ಲೂಕಿನ ಸಿಂಧೂವಳ್ಳಿಯ ಸಂತಾನ ಗಣಪತಿ ಕಲ್ಯಾಣ ಮಂಟಪ ದಲ್ಲಿ ಗುರುವಾರ ನಡೆದ ಕಳಲೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಅಭಿವೃದ್ಧಿ ಕಡೆಗೆ ಗಮನ ನೀಡದ ಸಂಸದರು ವ್ಯಕ್ತಿ ನಿಂದನೆಯಲ್ಲಿ ತೊಡಗಿ ದ್ದಾರೆ. ಇದು ಅವರ ವಯಸ್ಸು ಹಾಗೂ ಅನುಭವಕ್ಕೆ ತಕ್ಕುದಲ್ಲ. ಕ್ಷೇತ್ರದಲ್ಲಿ ಮಾಜಿ ಶಾಸಕ ಕೇಶವಮೂರ್ತಿ ಕಾಣುತ್ತಿಲ್ಲ ಎಂದು ಸಂಸದರು ಟೀಕಿಸಿದ್ದಾರೆ. ಆದರೆ, ಸಂಸದರು ಗೆದ್ದ ಬಳಿಕ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ ಎಂಬ ವಿಚಾರ ಕ್ಷೇತ್ರದ ಜನತೆಗೆ ಗೊತ್ತಿದೆ’ ಎಂದು ಟೀಕಿಸಿದರು.

‘ನಾನು ಸಂಸದನಾಗಿದ್ದ ಅವಧಿ ಯಲ್ಲಿ ಸಾಗರ ಮಾಲಾ ಯೋಜನೆಯಡಿ ಪ್ರಸ್ತಾವ ಸಲ್ಲಿಸಿ ನಂಜನಗೂಡು ರಾಷ್ಟ್ರಪತಿ ರಸ್ತೆ, ಚಿನ್ನದ ಗುಡಿ ಹುಂಡಿ, ಪಣ್ಯದ ಹುಂಡಿ ರೈಲ್ವೆ ಗೇಟ್‌ಗಳಿಗೆ ಬದಲಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದೆ. ಭೂಸ್ವಾಧೀನ ಮಾಡಿಸಲು 3 ವರ್ಷ ತೆಗೆದುಕೊಂಡಿದ್ದಾರೆ. ನಂಜನಗೂಡಿನ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅಡ್ಡಿಪಡಿಸಲಾಗಿದೆ’ ಎಂದು ದೂರಿದರು.

‘ನಿಮ್ಮ ಆರೋಗ್ಯ ಸರಿಯಿಲ್ಲ ಎಂಬುದು ತಿಳಿದಿದೆ. ವಿರೋಧಿಗಳನ್ನು ತುಚ್ಛವಾಗಿ ನಿಂದಿಸುವುದನ್ನು ಬಿಟ್ಟು, ಮತ ನೀಡಿ ಗೆಲ್ಲಿಸಿದ ಜನರ ಋಣ ತೀರಿಸುವ ಕೆಲಸ ಮಾಡಿ’ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಮುಖಂಡರಾದ ಸೋಮೇಶ್, ರವಿಕುಮಾರ್, ಮಾರುತಿ, ನಾಗೇಶ್ ರಾಜ್, ಶಶಿಕಲಾ, ಗ್ರಾ.ಪಂ ಸದಸ್ಯೆ ಮಂಗಳಾ, ಅಕ್ಬರ್ ಅಲೀಂ, ದೇಬೂರು ಅಶೋಕ್, ಎಡತಲೆ ದೊರೆಸ್ವಾಮಿ ನಾಯ್ಕ, ವಿಜಯ್ ಕುಮಾರ್, ಮಂಜುನಾಥ್ ಉಪಸ್ಥಿತರಿದ್ದರು.

‘12,650 ಮಂದಿ ನೋಂದಣಿ’

‘ತಾಲ್ಲೂಕಿನಲ್ಲಿ 12,650 ಮಂದಿ ಹೊಸದಾಗಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದಾರೆ. ಸದಸ್ಯತ್ವ ನೋಂದಣಿಯಲ್ಲಿ ಜಿಲ್ಲೆಯಲ್ಲೇ ನಂಜನಗೂಡು ತಾಲ್ಲೂಕು ಮುಂದಿದೆ. ದೇಶದಲ್ಲಿ 18 ಲಕ್ಷ ಮಂದಿ ಹೊಸದಾಗಿ ಕಾಂಗ್ರೆಸ್ ಸದಸ್ಯತ್ವ ಪಡೆದುಕೊಂಡಿದ್ದಾರೆ. ಮಾರ್ಚ್ 31ರವರೆಗೆ ಸದಸ್ಯತ್ವ ನೋಂದಾಯಿಸಲು ಅವಕಾಶವಿದೆ. ಪಕ್ಷದ ಕಾರ್ಯಕರ್ತರು ಮನೆ–ಮನೆಗಳಿಗೆ ತೆರಳಿ, ಪಕ್ಷದ ಕಾರ್ಯಕ್ರಮಗಳನ್ನು ವಿವರಿಸಬೇಕು. ಯುವಕರು ಹಾಗೂ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಬೇಕು’ ಎಂದು ಆರ್‌.ಧ್ರುವನಾರಾಯಣ ಸಲಹೆ ನೀಡಿದರು.

***

ಬಿಜೆಪಿಯ ನಾಯಕರು ಧರ್ಮ ಹಾಗೂ ಜಾತಿಯನ್ನು ಬಳಸಿ ಕೊಂಡು ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ.

ಆರ್‌.ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.