ಮೈಸೂರು: ಚೆನ್ನೈ- ಬೆಂಗಳೂರು- ಮೈಸೂರು ವಂದೇಭಾರತ್ ಎಕ್ಸ್ ಪ್ರೆಸ್ ಸೋಮವಾರ ಮಧ್ಯಾಹ್ನ 12.13ಕ್ಕೆ ಮೈಸೂರಿಗೆ ಆಗಮಿಸಿತು.
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನ.11ರ ಶುಕ್ರವಾರ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲಿನ ಪ್ರಾಯೋಗಿಕ ಸಂಚಾರವು ಸೋಮವಾರ ನಡೆಯಿತು.
ರೈಲನ್ನು ಮೊದಲ ಬಾರಿ ನೋಡುವ ಕಾತರದಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ ನಲ್ಲಿ ಜಮಾಯಿಸಿದ್ದರು.
ನೀಲಿ- ಶ್ವೇತ ಬಣ್ಣದ ರೈಲಿನ ಎಂಜಿನ್ ಕಾಣುತ್ತಿದ್ದಂತೆ ಹರ್ಷೋದ್ಗಾರ ಮುಗಿಲು ಮುಟ್ಟಿತು. ಶಿಳ್ಳೆ- ಚಪ್ಪಾಳೆಯ ಮೂಲಕ ಸ್ವಾಗತಿಸಿದರು.
ವಂದೇ ಭಾರತ್ ರೈಲನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಚೆನ್ನೈ- ಮೈಸೂರು ಮಾರ್ಗದಲ್ಲಿ ಓಡುವ ಐದನೇ ವಂದೇ ಭಾರತ್ ರೈಲು ಇದಾಗಿದೆ.
ನವದೆಹಲಿ- ವಾರಾಣಸಿ, ನವದೆಹಲಿ- ವೈಷ್ಣೋದೇವಿ, ಗಾಂಧಿನಗರ- ಮುಂಬೈ, ನವದೆಹಲಿ-ಉನಾ ನಡುವೆ ವಂದೇ ಭಾರತ್ ರೈಲುಗಳು ಕಾರ್ಯಾಚರಿಸಿದ್ದು, ದೇಶದ ಅತ್ಯಾಧುನಿಕ ರೈಲು ಇದಾಗಿದೆ. ವೇಗ ಹಾಗೂ ಸಾಮರ್ಥ್ಯಕ್ಕೆ ಹೆಸರಾಗಿರುವ ವಂದೇ ಭಾರತ್ ಕಡಿಮೆ ಅವಧಿಯಲ್ಲಿ ದೂರ ಪ್ರಯಾಣ ಕ್ರಮಿಸುವುದು ಇದರ ವಿಶೇಷ!
100 ಕಿ.ಮೀ ವೇಗವನ್ನು ತಲುಪಲು ತೆಗೆದುಕೊಳ್ಳುವ ಸಮಯ ಕೇವಲ 52 ಸೆಕೆಂಡ್ ಆಗಿವೆ. ಐಶಾರಾಮಿ ಆಸನ, ಸ್ವಯಂಚಾಲಿತ ಅಗ್ನಿ ಸೆನ್ಸಾರ್ ಗಳು, ಸಿಸಿಟಿವಿ ಕ್ಯಾಮೆರಾ, ವೈಫೈ, ಜಿಪಿಎಸ್ ವ್ಯವಸ್ಥೆ ರೈಲಿನಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.