ಮೈಸೂರು: ನಂಜನಗೂಡು ರಥೋತ್ಸವವನ್ನು ರದ್ದುಪಡಿಸಿರುವ ಕ್ರಮ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ಶುಕ್ರವಾರ ಇಲ್ಲಿನ ಜಯಚಾಮರಾಜ ಒಡೆಯರ್ (ಹಾರ್ಡಿಂಚ್ ವೃತ್ತದಲ್ಲಿ) ವೃತ್ತದಲ್ಲಿ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಜಮಖಾನ ಹಾಸಿಕೊಂಡ ಅವರು, ಅದರ ಮೇಲೆ ಉರುಳು ಸೇವೆ ಮಾಡುವ ಮೂಲಕ ಜಿಲ್ಲಾಡಳಿತದ ನಿರ್ಧಾರವನ್ನು ಅಣಕವಾಡಿದರು. ಜತೆಗೆ, ಕರ್ಪೂರ, ಸಾಂಬ್ರಾಣಿ, ಗಂಧದ ಕಡ್ಡಿಗಳನ್ನು ಹಚ್ಚುವ ಮೂಲಕ ಕಿಡಿಕಾರಿದರು.
ಈ ವೇಳೆ ಮಾತನಾಡಿದ ಅವರು, ‘ರಾಜಕಾರಣಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸುತ್ತಾರೆ. ಇಲ್ಲಿ ಹರಡದ ಕೊರೊನಾ ವೈರಸ್, ಜಾತ್ರೆಯಲ್ಲಿ ಮಾತ್ರ ಹರಡುತ್ತದೆ ಎಂಬುದು ತಪ್ಪುಕಲ್ಪನೆ. ಯಾವುದೇ ಕಾರಣದಿಂದಲೂ ಜಾತ್ರೆಯಲ್ಲಿ ಸೋಂಕು ಹರಡುವುದಿಲ್ಲ. ಹೀಗಾಗಿ, ಕೂಡಲೇ ಜಿಲ್ಲಾಡಳಿತ ನಿರ್ಬಂಧವನ್ನು ತೆರವುಗೊಳಿಸಿ ರಥೋತ್ಸವಕ್ಕೆ ಅನುಮತಿ ನೀಡಬೇಕು’ ಎಂದು ಹೇಳಿದರು.
ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ ಹಾಗೂ ತಾಯೂರು ವಿಠಲಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.